ಆನೇಕಲ್: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪೋಡು ಗ್ರಾಮದ ಸರ್ವೇ ನಂಬರ್ 156/6 ರಲ್ಲಿ 18.11 ಗುಂಟೆ ಸರ್ಕಾರಿ ಭೂಮಿಯನ್ನು ಸೋಮವಾರ ತಹಸೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಯಿತು.
ಒತ್ತುವರಿ ಭೂಮಿಯಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದರೆ ಮತ್ತೆ ಹಲವರು ನಿವೇಶನ ವಿಂಗಡಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶೇಷ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಲಾಗಿತ್ತು.
ಜೆಸಿಬಿ ಮೂಲಕ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲಾಯಿತು. ಮಾನವೀಯತೆ ದೃಷ್ಟಿಯಿಂದ ಕಾಲಾವಕಾಶ ಮನೆ ತೆರವು ಕಾರ್ಯಾಚರಣೆ ವೇಳೆ ನಿವಾಸಿಗಳು ಕಾಲಾವಕಾಶ ಕೇಳಿದ್ದರಿಂದ ಮಾನವೀಯ ದೃಷ್ಟಿಯಿಂದ ಮನೆಯಲ್ಲಿನ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಕಟ್ಟಡ ತೆರವಿಗೆ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಸರ್ವೇ ನಂ. 156 ರಲ್ಲಿ 16 ಒತ್ತುವರಿ ಪ್ರಕರಣಗಳಿದ್ದು, ಬಹುತೇಕ ತೆರವುಗೊಳಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.