ಬೆಂಗಳೂರು: ಅವರು ಆ ಚಿತ್ರಮಂದಿರದಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರು. ಆದರೆ ತನ್ನ ಜೀವ-ಜೀವನದ ಭದ್ರತೆಯನ್ನು ಲೆಕ್ಕಿಸದೆ ಕೆಲಸ ಮಾಡಲು ಹೋಗಿ ಜೀವಕ್ಕೇ ಸಂಚಕಾರ ತಂದುಕೊಂಡಿದ್ದಾರೆ. ಈ ಸಂಬಂಧ ಚಿತ್ರಮಂದಿರದ ಮ್ಯಾನೇಜರ್ ಹಾಗೂ ಸೂಪರ್ವೈಸರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ. ಕೈಯಲ್ಲಿದ್ದ ಬ್ಯಾನರ್ ಮೂಲಕವೇ ತನ್ನ ಜೀವನದ ಕ್ಲೈಮ್ಯಾಕ್ಸ್ ಆಗಲಿದೆ ಎಂಬುದು 65 ವರ್ಷದ ಆ ವ್ಯಕ್ತಿಗೆ ಒಂಚೂರೂ ಸುಳಿವೇ ಸಿಕ್ಕಿರಲಿಲ್ಲ ಅನಿಸುತ್ತದೆ. ತ್ರಿವೇಣಿ ಚಿತ್ರಮಂದಿರದ ಕಟ್ಟಡದ ಮೇಲಿನ ಹಳೇ ಬ್ಯಾನರ್ ತೆಗೆದು, ಹೊಸ ಬ್ಯಾನರ್ ಕಟ್ಟುತ್ತಿದ್ದ ಸೆಕ್ಯೂರಿಟಿ ಗಾರ್ಡ್, ಆರ್.ಟಿ.ನಗರದ ಚಂದ್ರಪ್ಪ, ಆಯತಪ್ಪಿ ಮೇಲಿನಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಭದ್ರತಾ ಸಿಬ್ಬಂದಿಯ ಪುತ್ರ ಮಂಜುನಾಥ್ ಕೊಟ್ಟ ದೂರಿನ ಮೇರೆಗೆ ತ್ರಿವೇಣಿ ಚಿತ್ರಮಂದಿರದ ಮ್ಯಾನೇಜರ್ ಮತ್ತು ಸೂಪರ್ವೈಸರ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.
ಚಂದ್ರಪ್ಪ ಕಳೆದ ಎರಡು ವರ್ಷದಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮೆಜೆಸ್ಟಿಕ್ನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೆ ಭಾನುವಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 8.15ರಲ್ಲಿ ಹಳೇ ಬ್ಯಾನರ್ ತೆರವುಗೊಳಿಸಿ, ಹೊಸ ಬ್ಯಾನರ್ ಕಟ್ಟಲು ಅವರನ್ನು ಕಟ್ಟಡದ ಮೇಲೆ ಏರಿಸಿದ್ದರು. ಈ ವೇಳೆ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯತನದಿಂದ ಅನಾಹುತ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಂಭ ಮೇಳದಲ್ಲಿ ಟೆಂಟ್ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…
ಈ ಬಾರಿ ಸರಳ, ಶಿಕ್ಷಕಸ್ನೇಹಿ ವರ್ಗಾವಣೆ; ಟ್ರಾನ್ಸ್ಫರ್ ಮಿತಿಯೂ ಹೆಚ್ಚಳ…