ಪುತ್ತೂರು: ದಸರಾ ರಜೆಯನ್ನು ಮುಂದೂಡದೆ ಕೂಡಲೇ ಶಾಲೆ ಪುನರಾರಂಭಿಸುವಂತೆ ಎಸ್ಡಿಎಂಸಿ ಸಮನ್ವಯ ಸಮಿತಿಯಿಂದ ಮುಖ್ಯ ಮಂತ್ರಿ ಹಾಗೂ ಶಿಕ್ಷಣ ಮಂತ್ರಿಗಳಿಗೆ ಮನವಿ ಮಾಡಿದೆ.
ದಸರಾ ರಜೆ ಮುಗಿದು ಅ. 25 ಕ್ಕೆ ಶಾಲೆ ಪ್ರಾರಂಭ ಆಗಲು ಮಕ್ಕಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕೋವಿಡ್ ಕಾರಣದಿಂದ ಮಕ್ಕಳು ಕಲಿಕೆಯಲ್ಲಿ ಹಿಂದಿರುವ ಬಗ್ಗೆ ಪೋಷಕರಲ್ಲಿ ಆತಂಕವೂ ಮನೆ ಮಾಡಿದೆ. ಅದಲ್ಲದೆ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 800 ಗಂಟೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ 1000 ಗಂಟೆಗಳ ಪಾಠ ಆಗಬೇಕಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಗಂಟೆಗಳು ಈಗಾಗಲೇ ಕಡಿಮೆ ಇದೆ.
ಸರ್ಕಾರಿ ನೌಕರರ ಅನಧಿಕೃತ ಒಂದು ದಿನದ ಗೈರು ಹಾಜರಿ, ಮಳೆಗಾಲದ ರಜೆಗಳು ಸೇರಿ ಸುಮಾರು 50 ರಿಂದ 60 ಗಂಟೆಗಳ ಪಾಠ ಪ್ರವಚನ ನಡೆದಿರುವುದಿಲ್ಲ, ಇದರೊಂದಿಗೆ ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳ ಹೆಸರಲ್ಲಿ ಹೆಚ್ಚಿನ ಶಿಕ್ಷಕರು ಶಾಲೆಯಿಂದ ಹೊರಗೆ ಇದ್ದ ಕಾರಣ ಪಾಠಗಳು ನಡೆದಿರುವುದಿಲ್ಲ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರಕಿಸಿ ಕೊಡುವಲ್ಲಿ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳಿಗೆ ಕಲಿಕೆ ಆಗುವ ರೀತಿಯಲ್ಲಿ , ರಜೆಯನ್ನು ಮುಂದೂಡದೆ ನಿಗದಿತ ದಿನಕ್ಕೇ ಶಾಲೆಯನ್ನು ತೆರೆದು ಪಾಠ ಪ್ರವಚನ ನಡೆಯಲು ಅನುವು ಮಾಡಿ ಕೊಡಬೇಕೆಂದು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಸಮಿತಿಯ ಮೊಯ್ದೀನ್ ಕುಟ್ಟಿ ಆಗ್ರಹಿಸಿದ್ದಾರೆ.