More

    ಭೂಲೋಕದ ಸ್ವರ್ಗವಾಗಿಸಲು ಬಲ ತುಂಬಿದ ಸುಪ್ರೀಂಕೋರ್ಟ್​ ತೀರ್ಪು:ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾದ ಬಳಿಕ ಬದಲಾವಣೆ ಗಾಳಿ ಬೀಸಿತ್ತು…

    ನವದೆಹಲಿ: ಭೂಲೋಕದ ಸ್ವರ್ಗದಂತಿದ್ದ ಜಮ್ಮು ಮತ್ತು ಕಾಶ್ಮೀರ ಮೂರ್ನಾಲ್ಕು ದಶಕದಿಂದ ಪ್ರತ್ಯೇಕತಾವಾದಿಗಳು, ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿ ಮತ್ತು ಉಪಟಳದಿಂದ ನಲುಗಿಹೋಗಿತ್ತು. ಎಕೆ 47ನಿಂದ ಎಲ್ಲಿ ಯಾವಾಗ ಗುಂಡುಗಳು ಸಿಡಿಯುತ್ತವೆಯೋ, ಬಾಂಬ್​ ಎಲ್ಲಿ ಬ್ಲಾಸ್ಟ್​ ಆಗುತ್ತದೋ ಎಂದು ಅಲ್ಲಿನ ಜನ ಜೀವ ಕೈಯ್ಯಲ್ಲಿಡಿದು ಬದುಕುತ್ತಿದ್ದರು. ಇನ್ನ ಮೂಲನಿವಾಸಿಗಳಾದ ಕಾಶ್ಮೀರಿ ಪಂಡಿತರು ಇನ್ನಿಲ್ಲದ ಹಿಂಸೆ ಅನುಭವಿಸಿದರು…ಒಟ್ಟಾರೆ ನರಕದಂತೆ ಪರಿವರ್ತನೆಯಾಗಿತ್ತು.

    ಇದನ್ನೂ ಓದಿ: ಆರ್ಟಿಕಲ್ 370 ತೀರ್ಪು: ಜಮ್ಮು-ಕಾಶ್ಮೀರ ಸುತ್ತಮುತ್ತ ಬಿಗಿ ಬಂದೋಬಸ್ತ್​!
    ಆದರೆ ಕೇಂದ್ರದ ಬಿಜೆಪಿ ಸರ್ಕಾರ 2019ರಲ್ಲಿ ಆರ್ಟಿಕಲ್‌ 370 ರದ್ದು ಮಾಡಿದ್ದು, ಬಳಿಕ ಕಣಿವೆ ರಾಜ್ಯದಲ್ಲಿ ನೆಮ್ಮದಿ ಮರುಸ್ಥಾಪನೆಗೆ ಸಾಕಷ್ಟು ಪ್ರಯತ್ನಗಳಾದವು. ಶಾಂತಿ ಮರುಸ್ಥಾಪನೆಯಾಗಿದ್ದರ ಜತೆಗೆ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡವು. ಇದರ ನಡುವೆ ರಾಜ್ಯದಲ್ಲಿ ವಿಧಾನ ಸಭೆ ಅಸ್ಥಿತ್ವದಲ್ಲಿ ಇಲ್ಲದಿರುವಾಗ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಕುರಿತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

    ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ನೇತೃತ್ವದ. ನ್ಯಾಯಮೂರ್ತಿಗಳಾದ ಸಂಜಯ್​ ಕಿಷನ್​ ಕೌಲ್​, ಸಂಜೀವ್​​ ಖನ್ನಾ, ಬಿ.ಆರ್​.ಗವಾಯಿ ಮತ್ತು ಸೂರ್ಯಕಾಂತ್​ ಅವರನ್ನೊಳಗೊಂಡ ಸಂವಿಧಾನ ಪೀಟವು ಸೋಮವಾರ ತೀರ್ಪು ಪ್ರಕಟಿಸಿದ್ದು, ಆ ರಾಜ್ಯಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ. ಶೀಘ್ರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಸುವಂತೆ ಕೇಂದ್ರಕ್ಕೆ ಸೂಚಿಸಿದ್ದು, ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚಿಸಲಾಗುವುದು ಎಂದು ತೀರ್ಪು ಪ್ರಕಟಿಸುವ ವೇಳೆ ಸಿಜೆ ತಿಳಿಸಿರುವುದು ಆ ರಾಜ್ಯದಲ್ಲಿ ಶಾಂತಿ ಮುಂದುವರಿಯುವುದರ ಜತೆಗೆ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

    4 ವರ್ಷದಲ್ಲಿ ಬದಲಾವಣೆ ಗಾಳಿ ಬೀಸಿತ್ತು: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಮೇಲೆ ಕಾಶ್ಮೀರ ಕಣಿವೆಯ ಚಹರೆಯೇ ಬದಲಾಗಿತ್ತು. 2019ರ ಆಗಸ್ಟ್‌ 5ರಂದು ಕೇಂದ್ರ ಸರಕಾರ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಅಲ್ಲಿನ ಜನರ 70 ವರ್ಷಗಳ ನೋವನ್ನು ಅಂತ್ಯಗೊಳಿಸಿತ್ತು. ಜನರು ನಿರ್ಭೀತಿಯಿಂದ ಮನೆಗಳಿಂದ ಹೊರಬಂದು ಮುಕ್ತವಾಗಿ ವ್ಯಾಪಾರ, ಕೃಷಿ, ಉದ್ಯೋಗ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ದಿಲ್ಲದೆ ಇತರೆ ರಾಜ್ಯಗಳಂತೆ ಮುಖ್ಯವಾಹಿನಿಯತ್ತ ದಾಪುಗಾಲು ಹಾಕುತ್ತಿತ್ತು. ‘ಮಿನಿ ಪಾಕಿಸ್ತಾನ’ ದಂತಿದ್ದ ಕಾಶ್ಮೀರದಲ್ಲಿ ಇತರೆ ರಾಜ್ಯಗಳ ಜನರೂ ಆಸ್ತಿ ಖರೀದಿಸಿದರು. ಕಾನೂನುಗಳು ಬದಲಾದ್ದರಿಂದ ಜನ ಮುಖ್ಯವಾಹಿನಿಗೆ ಬಂದರು.

    ಬದಲಾಗಿದ್ದ ಶ್ರೀನಗರ ಚಿತ್ರಣ: 370ನೇ ವಿಧಿ ರದ್ದತಿಗೆ ಮೊದಲು ಕೇಂದ್ರ ಸರಕಾರದ ಯಾವುದೇ ಕಾನೂನು ಈ ನೆಲಕ್ಕೆ ಅನ್ವಯವಾಗುತ್ತಿರಲಿಲ್ಲ. ಯುವಕರು ನಿತ್ಯ ಕಲ್ಲು ತೂರಾಟ ನಡೆಸುತ್ತಿದ್ದರು. ಮುಂಬಯಿಯಲ್ಲಿ ಬಾಲಿವುಡ್‌ ಸಿನಿಮಾ ತೆರೆಕಂಡ ದಿನವೇ ಶ್ರೀನಗರದ ಪರದೆ ಮೇಲೂ ಶೋ ಮೂಡುತ್ತದೆ. 4 ವರ್ಷಗಳಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳನ್ನು ಕಾಶ್ಮೀರಿ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣ ವಿಚಾರದಲ್ಲಿ ಕಾಶ್ಮೀರ ಪುನಃ ಅಗ್ರಸ್ಥಾನಕ್ಕೇರಿರುವುದು ಇಲ್ಲಿ ಮನೆ ಮಾಡಿರುವ ನಿರ್ಭಯ ವಾತಾವರಣಕ್ಕೆ ಸಾಕ್ಷಿಯಾಗಿತ್ತು. ಲಾಲ್‌ಚೌಕದ ಕ್ಲಾಕ್‌ ಟವರ್‌ಗೆ ತಿರಂಗಾ ಬಣ್ಣ ಮೂಡಿದ್ದು, ಕಣ್ಮನ ಸೆಳೆಯುತ್ತಿದೆ.
    ರಾಜಕೀಯ ಚಿತ್ರಣ ಹೇಗಿತ್ತು: ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019ರಂತೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂಬ 2 ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಸ್ವಂತ ಧ್ವಜ ಮತ್ತು ತನ್ನದೇ ಆದ ಸಂವಿಧಾನದ ವ್ಯವಸ್ಥೆ ಅಂತ್ಯವಾಗಿತ್ತು. ವಿಧಾನಸಭೆಯ ಅವಧಿ 6 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಉದ್ಯೋಗಗಳು ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಲಾಗಿತ್ತು. ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ವಿಧೇಯಕವು ಇಲ್ಲಿನ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು 83ರಿಂದ 90ಕ್ಕೆ ಹೆಚ್ಚಿಸಿದೆ. ಅಲ್ಪಸಂಖ್ಯಾತ ವರ್ಗದ ಕಾಶ್ಮೀರಿ ಪಂಡಿತ ಪ್ರತಿನಿಧಿಗಳಿಗೆ ಇದರಿಂದ ಅನುಕೂಲ ಆಗಲಿದೆ. 2014ರ ನಂತರ ವಿಧಾನಸಭೆ ಚುನಾವಣೆ ನಡೆದಿಲ್ಲ. 370ನೇ ವಿಧಿ ರದ್ದತಿ ನಂತರ ಸದ್ಯದಲ್ಲೇ ಕಣಿವೆ ರಾಜ್ಯ ಮೊದಲ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾಗಲಿದೆ.

    ಪ್ರತ್ಯೇಕತಾವಾದಿಗಳಿಗೆ ಸಿಗಲಿಲ್ಲ ಬೆಂಬಲ: ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಒಳಗೆ ಮತ್ತು ಹೊರಗಿನ ಬೆಂಬಲ ನಿಂತಿತ್ತು. 2016-19ರ ನಡುವೆ 900 ಭಯೋತ್ಪಾದಕ ಘಟನೆಗಳು ನಡೆದಿದ್ದು, 290 ಯೋಧರು ಹುತಾತ್ಮರಾಗಿದ್ದರು ಮತ್ತು 191 ನಾಗರಿಕರನ್ನು ಕೊಲ್ಲಲಾಗಿತ್ತು. 2019- 22ರ ನಡುವೆ ಒಟ್ಟು 617 ಭಯೋತ್ಪಾದಕ ಘಟನೆಗಳಲ್ಲಿ 174 ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. 110 ನಾಗರಿಕರು ಸಾವನ್ನಪ್ಪಿದ್ದರು. ಎನ್‌ಐಎ ನಿರಂತರವಾಗಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುತ್ತಿದ್ದು, ಉಗ್ರರ ಜಾಲಗಳನ್ನು ನಾಶಪಡಿಸುತ್ತಿದೆ. 2018ರಲ್ಲಿ 58, 2019ರಲ್ಲಿ 70 ಹಾಗೂ 2020ರಲ್ಲಿ 6 ಮಂದಿ ಹುರಿಯತ್‌ ನಾಯಕರನ್ನು ಎನ್‌ಐಎ ಬಂಧಿಸಿತ್ತು. 18 ಹುರಿಯತ್‌ ನಾಯಕರಿಗೆ ಸರ್ಕಾರಿ ವೆಚ್ಚದಲ್ಲಿ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಪ್ರತ್ಯೇಕತಾವಾದಿಗಳ 82 ಬ್ಯಾಂಕ್‌ ಖಾತೆಗಳಲ್ಲಿನ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

    ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ?: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಜುಲೈ 26ರಂದು ರಾಜ್ಯಸಭೆಯಲ್ಲಿ ಕಾಶ್ಮೀರದ ಕಲ್ಯಾಣದ ವರದಿ ಮಂಡಿಸಿದ್ದರು. ಇದರ ಪ್ರಕಾರ, ಆರ್ಟಿಕಲ್‌ 370 ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರ ಸರಕಾರವು 29,295 ಹುದ್ದೆಗಳನ್ನು ಭರ್ತಿ ಮಾಡಿದೆ. ನೇಮಕಾತಿ ಏಜೆನ್ಸಿಗಳು 7,924 ಖಾಲಿ ಹುದ್ದೆಗಳನ್ನು ಪ್ರಕಟಿಸಿವೆ. 2,504 ಅಭ್ಯರ್ಥಿಗಳು ನೇಮಕ ಪರೀಕ್ಷೆಗಳನ್ನು ಬರೆದು ಫಲಿತಾಂಶಕ್ಕಾಗಿ ಕಾದಿದ್ದಾರೆ. 12,560 ಯುವಕರಿಗೆ ಉದ್ಯೋಗಕ್ಕಾಗಿ ಕೌಶಲ ತರಬೇತಿ ನೀಡಲಾಗಿದೆ. ಅಂತಾರಾಷ್ಟ್ರೀಯ ಗಡಿಯ ಸಮೀಪ ವಾಸಿಸುವವರಿಗೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ. 3ರಷ್ಟು ಮೀಸಲು ನೀಡಲಾಗಿದೆ.

    ಕೈಗಾರಿಕೆಗಳಿಗೆ ಭೂಮಿ: ಕಳೆದ 4 ವರ್ಷಗಳಲ್ಲಿ 188 ಬೃಹತ್‌ ಹೂಡಿಕೆದಾರರು ಕೈಗಾರಿಕೆ, ಕಂಪನಿಗಳ ಶಾಖೆ ಸ್ಥಾಪನೆಗಾಗಿ ಇಲ್ಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಇದೇ ಮೊದಲ ಬಾರಿಗೆ ವಿದೇಶಿ ನೇರ ಹೂಡಿಕೆ ಯೋಜನೆ ಜಾರಿಗೊಂಡಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ‘ಎಂಆರ್‌’ ಗ್ರೂಪ್‌ಗೆ ಸೇರಿದ 500 ಕೋಟಿ ರೂ. ವೆಚ್ಚದ ಈ ಯೋಜನೆಯು 10 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್‌ ಅಡಿಯಲ್ಲಿ 58,477 ಕೋಟಿ ರೂ. ವೆಚ್ಚದ 53 ಯೋಜನೆಗಳು ಆರಂಭಗೊಂಡಿವೆ. ಇದರಿಂದ ರಸ್ತೆಗಳು, ವಿದ್ಯುತ್‌, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಮತ್ತು ಕೌಶಲ್ಯದಂಥ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲಿವೆ. ಉಗ್ರರ ದಮನವಾದ ನಂತರ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 2022ರಲ್ಲಿ 1.88 ಕೋಟಿ ಪ್ರವಾಸಿಗರು ಕಾಶ್ಮೀರದ ಸೌಂದರ್ಯವನ್ನು ಆನಂದಿಸಿದ್ದಾರೆ. ಅಮರನಾಥನ ದರ್ಶನಕ್ಕೂ 2021, 2022 ಮತ್ತು 2023ರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ವರ್ಷ ದಾಖಲೆಯ 4.3 ಲಕ್ಷಕ್ಕೂ ಹೆಚ್ಚು ಭಕ್ತರು ಅಮರನಾಥನ ದರ್ಶನ ಪಡೆದಿದ್ದಾರೆ. ಉಗ್ರರ ಬೆದರಿಕೆಯಿಂದ ಮುಚ್ಚಲ್ಪಟ್ಟಿದ್ದ ಒಟ್ಟು 531 ಶಾಲೆಗಳನ್ನು ಪುನಃ ತೆರೆಯಲಾಗಿದೆ.

    ಒಟ್ಟಾರೆ ಹೇಳುವುದಾದರೆ ಕಳೆದ ನಾಲ್ಕುವರ್ಷದಲ್ಲಿ ಕೇಂದ್ರ ಕೈಗೊಂಡ ದಿಟ್ಟ ನಿರ್ಧಾರ ಮತ್ತು ಅದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳಿಗೆ ಸುಪ್ರೀಂಕೋರ್ಟ್​ ತೀರ್ಪು ಮತ್ತಷ್ಟು ಬಲ ತುಂಬುವಂತಾಗಿದೆ.

    ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೇಲೆ ಐಟಿ ದಾಳಿ; 5 ದಿನಗಳ ನಗದು ಎಣಿಕೆ ಮುಕ್ತಾಯ! ವಶಪಡಿಸಿಕೊಂಡ ಒಟ್ಟು ಮೊತ್ತ ಇಷ್ಟಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts