ಕೋಲಾರ: ಅಯೋಧ್ಯೆ, ಕಾಶಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಅಬ್ಬಣಿ ಗ್ರಾಮದ ಶಂಕರಪ್ಪ ಅವರು 28 ಮಂದಿಯಿಂದ ಹಣ ಪಡೆದುಕೊಂಡು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ವಡಗೂರು ಗ್ರಾಮದ ವೆಂಕಟಮ್ಮ ಅವರನ್ನು ಮುಖ್ಯಸ್ಥರನ್ನಾಗಿಸಿ ವಡಗೂರು, ಮಾಲೂರು, ಹೊಸಕೋಟೆ, ಕೋಲಾರ ತಾಲೂಕಿನ ವಿವಿಧ ಗ್ರಾಮಗಳ 28 ಮಂದಿಯಿಂದ ತಲಾ 3,500 ರೂ. ಪಡೆದು, ಕಾಶಿ, ಅಯೋಧ್ಯೆ ಮುಂತಾದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ. ಉಳಿದ ಹಣವನ್ನು ಮೋದಿ ಸ್ಕೀಂನಲ್ಲಿ ಹಾಕುವುದಾಗಿ ಹೇಳಿದ್ದರು. 28 ಮಂದಿ ವೆಂಕಟಮ್ಮ ಮೂಲಕ ಅಬ್ಬಣಿ ಶಂಕರಪ್ಪನಿಗೆ ತಲಾ 3,500 ರೂ. ನೀಡಿದ್ದರು. ಸೋಮವಾರ ಬೆಳಗ್ಗೆ 28 ಮಂದಿಗೂ ಕರೆ ಮಾಡಿದ್ದ ಶಂಕರಪ್ಪ, ವಡಗೂರು ಗ್ರಾಮಕ್ಕೆ ಬನ್ನಿ, ಮಂಗಳವಾರ ಬೆಳಗ್ಗೆ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಪ್ರವಾಸಕ್ಕೆ ತೆರಳುವುದಾಗಿ ತಿಳಿಸಿದ್ದ. ಅದರಂತೆಯೇ ಲಗೇಜು ಸಮೇತ ವಿವಿಧೆಯಿಂದ ವಡಗೂರು ಗ್ರಾಮಕ್ಕೆ ಆಗಮಿಸಿ 28 ಮಂದಿಯೂ ಆಗಮಿಸಿದ್ದರು. ಆದರೆ ಸಂಜೆ 4 ಗಂಟೆ ಸುಮಾರಿಗೆ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡಿದ್ದು, ಸೋಮವಾರ ರಾತ್ರಿಯಾದರೂ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ.
ತಿಂಗಳಾನುಗಟ್ಟಲೇ ಕಾಯಿಸಿ ಈ ರೀತಿ ಅನ್ಯಾಯ ಮಾಡಿರುವ ವ್ಯಕ್ತಿ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಬೇಡ. ಕಷ್ಟಪಟ್ಟು ದುಡಿದ ಹಣವನ್ನು ವಾಪಸ್ ನೀಡಲಿ ಎಂದು ಆಗ್ರಹಿಸಿದ ವಂಚನೆಗೊಳಗಾದವರು, ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ವಡಗೂರು ಶಂಕರ್ರೆಡ್ಡಿ, ತಾಲೂಕು ಅಧ್ಯಕ್ಷ ಯಾರಂಘಟ್ಟ ಶಶಿಕುಮಾರ್, ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ನಂದೀಶ್, ವೇಣು, ಸುಖೇಶ್, ಪಟೇಲ್ ರವಿ, ಗಿರೀಶ್ ಇದ್ದರು.