ನವದೆಹಲಿ: ಕೌಶಲ್ಯಾಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ತಮ್ಮ ವಿರುದ್ಧ ದಾಖಲಾಗಿರುವ FIR ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
FIR ರದ್ದುಪಡಿಸುವ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ನಡೆಸುವುದಾಗಿ ಹೇಳಿ ಅರ್ಜಿಯನ್ನು ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆ ಪ್ರಕರಣ; ನಾವು ತ್ರಿಶೂಲ ಹಿಡಿದಂತೆ ಅವರು ತಲ್ವಾರ್ ಹಿಡಿದಿದ್ದಾರೆ: ಮಧು ಬಂಗಾರಪ್ಪ
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. ಕಳೆದ ವಾರ ನ್ಯಾಯಮೂರ್ತಿ ಎಸ್.ವಿ.ಎನ್. ಭಟ್ಟಿ ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ಚಂದ್ರಬಾಬು ನಾಯ್ಡು ಅವರ ಅರ್ಜಿಯನ್ನು ಮುಂದೂಡಿದೆ.
ನಾಯ್ಡು ವಿರುದ್ಧ ಸಲ್ಲಿಸಲಾಗಿರುವ FIR ಪ್ರತಿಪಕ್ಷವನ್ನು ಹಳಿತಪ್ಪಿಸಲು ಆಡಳಿತ ಪಕ್ಷ ನಡೆಸಿರುವ ಸೇಡಿನ ಸಂಯೋಜಿತ ಅಭಿಯಾನವಾಗಿದೆ. 21 ತಿಂಗಳ ಹಿಂದೆ ದಾಖಲಾದ ಎಫ್ಐಆರ್ನಲ್ಲಿ ಅರ್ಜಿದಾರ ನಾಯ್ಡು ಅವರನ್ನು ಹೆಸರಿಸಲಾಗಿದೆ. ಆನಂತರ ಅವರನ್ನು ಕಾನೂನುಬಾಹಿರ ರೀತಿಯಲ್ಲಿ ಬಂಧಿಸಲಾಯಿತು. ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ನಾಯ್ಡು ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ಧಾರೆ.