ನವದೆಹಲಿ: ರಾಷ್ಟ್ರ ರಾಜಧಾನಿ ಆಸುಪಾಸಿನಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದ ತಾತ್ಕಾಲಿಕ ಜಾಮೀನು ಕೋರಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಅಲ್ಲದೆ, ಬೇಸಿಗೆ ರಜೆ ಅವಧಿಯಲ್ಲಿ ಸಜ್ಜನ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ತಿಳಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಈ ವಿಚಾರಣೆ ನಡೆಸುತ್ತಿದ್ದು, ಸಜ್ಜನ್ ಕುಮಾರ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ದೆಹಲಿ ಏಮ್ಸ್ನ ವೈದ್ಯಕೀಯ ವರದಿಯನ್ನು ಶಬರಿಮಲೆ ಕೇಸ್ ವಿಚಾರಣೆ ಮುಗಿದ ಬಳಿಕ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಸಿಖ್ ವಿರೋಧಿ ದಂಗೆ ಸಂಬಂಧ ದೆಹಲಿ ಹೈಕೋರ್ಟ್ ಸಜ್ಜನ್ ಕುಮಾರ್ ಅವರಿಗೆ 2018ರ ಡಿಸೆಂಬರ್ 17ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. 1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಅಂಗರಕ್ಷಕರ ಗುಂಡಿಗೆ ಬಲಿಯಾದ ನಂತರದಲ್ಲಿ ನವೆಂಬರ್1-2ರ ನಡುವೆ ಸಿಖ್ ವಿರೋಧಿ ದಂಗೆ ನಡೆದಿತ್ತು. ದೆಹಲಿಯ ರಾಜ್ ನಗರ ಪಾರ್ಟ್-2ರ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ, ದೆಲಿಯ ಕಂಟೋನ್ಮೆಂಟ್ನ ರಾಜ್ ನಗರ ಪಾರ್ಟ್ 1 ಪ್ರದೇಶದಲ್ಲಿ ಐವರು ಸಿಖ್ ಸಮುದಾಯದವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ಗೆ ಶಿಕ್ಷೆ ಆಗಿರುವಂಥದ್ದು. (ಏಜೆನ್ಸೀಸ್)