ಬೆಂಗಳೂರು: ಜೆಡಿಎಸ್ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಅವರ ಪತ್ನಿ, ಪುತ್ರನ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ತೋರಿಸಿದೆ. ಆದೇಶ ಹೊರಬೀಳುತ್ತಿದಂತೆ ಸಂಜಯನಗರ ಪೊಲೀಸರು ಏಳು ವರ್ಷಗಳ ಬಳಿಕ ಮತ್ತೆ ತನಿಖೆ ಚುರುಕುಗೊಳಿಸಿದ್ದಾರೆ.
ಸಂಜಯನಗರದ ವೈದ್ಯ ಡಾ. ಲಕ್ಷ್ಮಣ್, ಅತ್ತಿಬೆಲೆ ಹೋಬಳಿ ಬಳ್ಳೂರಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ 100 ಎಕರೆ ಜಮೀನು ಖರೀದಿಸಲು ಯೋಜಿಸಿದ್ದರು. ಅದಕ್ಕಾಗಿ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್ ಮಾಲೀಕತ್ವದ ಪ್ರಮೀಳಾ-ಸಂತೋಷ್ ಲ್ಯಾಂಡ್ ಡೆವಲಪರ್ಸ್ ಜತೆ 2012ರಲ್ಲಿ ಒಡಂಬರಿಕೆ ಮಾಡಿಕೊಂಡಿದ್ದರು. ಈ ವೇಳೆ ಸಂತೋಷ್ಗೆ 9 ಕೋಟಿ ರೂ. ಡಾ.ಲಕ್ಷ್ಮಣ್ ಪಾವತಿ ಮಾಡಿದ್ದರು.
ಆದರೆ, ಸಂತೋಷ್ ಜಮೀನು ಕೊಡಿಸಿಲ್ಲ. ಹಣವನ್ನು ಹಿಂತಿರುಗಿಸಿರಲಿಲ್ಲ. ಹೀಗಾಗಿ ಡಾ. ಲಕ್ಷ್ಮಣ್ 2013ರ ಮೇ 29ರಂದು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ವಾದ ಆಲಿಸಿದ ಕೋರ್ಟ್, ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಂಜಯನಗರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಕೋರ್ಟ್ ನಿರ್ದೇಶನದ ಮೇಲೆ ಡಿ.ಸಿ.ತಮ್ಮಣ್ಣ, ಪತ್ನಿ ಪ್ರಮೀಳಾ ಮತ್ತು ಪುತ್ರ ಸಂತೋಷ್ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಇದನ್ನೂ ಓದಿ ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್ ಸಿಂಗ್; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಈ ಮೇರೆಗೆ ಸಂತೋಷ್ ವಿಚಾರಣೆಗೆ ಹಾಜರಾಗಿದ್ದರು. ಇದಾದ ಕೆಲವೇ ದಿನಕ್ಕೆ ಅಧೀನ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಹೋಗಿದ್ದರು.
ಹೈಕೋರ್ಟ್ನಲ್ಲಿ ಪೊಲೀಸರ ಪರವಾದ ಮೇಲೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ವಾದ- ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್, ಮಾಜಿ ಸಚಿವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಸಂಬಂಧ ಪೊಲೀಸರು ತನಿಖೆ ಮುಂದುವರೆಸುವಂತೆ ಆದೇಶಿಸಿದೆ. ತೀರ್ಪಿನ ಪ್ರತಿ ಪಡೆದಿರುವ ಸಂಜಯನಗರ ಪೊಲೀಸರು, ಮತ್ತೆ ಇದೀಗ ತನಿಖೆ ಕೈಗೊಂಡಿದ್ದಾರೆ.
ಹೊಸದಾಗಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮಾರ್ಚ್ನಲ್ಲಿ ಆದೇಶ ಪ್ರತಿ ಕೈ ಸೇರಿದ್ದು, ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತನಿಖೆಗೆ ಅಡ್ಡಿ ಉಂಟಾಗಿದೆ. ಶೀಘ್ರವೇ ವಿಚಾರಣೆ ಪೂರ್ಣಗೊಳಿಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.