ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ನೀಡಿದ ಅಂತಿಮ ತೀರ್ಪಿನ ಪಾಲನೆಗೆ ಅವಕಾಶ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಗುರುವಾರ ಪುರಸ್ಕರಿಸಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರಿದ್ದ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿದ್ದು,ಕರ್ನಾಟಕ, ಗೋವಾ, ಮಹಾರಾಷ್ಟ್ರಗಳ ಪ್ರತಿನಿಧಿಗಳ ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ಹೊರಡಿಸಿತು.ಈ ವಿಚಾರಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ಜುಲೈನಲ್ಲಿ ನಡೆಯಲಿದೆ ಎಂದೂ ಹೇಳಿತು. ಅಲ್ಲದೆ, ಮಧ್ಯಂತರ ಆದೇಶವು ಅಂತಿಮ ಆದೇಶದ ತನಕ ಮಾತ್ರವೇ ಊರ್ಜಿತವಾಗಿರುತ್ತದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಹದಾಯಿ ಜಲ ವಿವಾದ ನ್ಯಾಯಾಧಿಕರಣವು 2018ರ ಆಗಸ್ಟ್ 14ರಂದು ನೀಡಿದ ಅಂತಿಮ ಆದೇಶ ಪ್ರಕಾರ, 13.42 ಟಿಎಂಸಿ ನೀರು(ಮಲಪ್ರಭಾ ನದಿಯಗೆ 3.9 ಟಿಎಂಸಿ ಸೇರಿ) ಮಹದಾಯಿಯಿಂದ ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕು. ಮಹಾರಾಷ್ಟ್ರಕ್ಕೆ 1.33 ಟಿಎಂಸಿ, ಗೋವಾಕ್ಕೆ 24 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. (ಏಜೆನ್ಸೀಸ್)