ಸಾಸ್ವೆಹಳ್ಳಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ್ದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಇಲ್ಲಿನ ಶ್ರೀಕೋಟೆ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಹೊನ್ನಾಳಿ-ನ್ಯಾಮತಿ ತಾಲೂಕು ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಸಾಸ್ವೆಹಳ್ಳಿ ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
ಅಟಲ್ಜೀ ಅವರು ಮಾಡಿದ ಸಾಧನೆಗಳನ್ನು ನಾವು ಜನರಿಗೆ ತಿಳಿಸಲಾಗದೆ ಅಂದು ಸೋತಿದ್ದೇವು. ಅದೇ ತಪ್ಪನ್ನು ನಾವು ಕಳೆದ ವಿಧಾನ ಸಭೆಯಲ್ಲಿ ಮಾಡಿ ಅಧಿಕಾರ ಕಳೆದುಕೊಂಡಿದ್ದೇವೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ್ದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಜನರಿಗೆ ಕೇಂದ್ರದ ಸಾಧನೆಗಳನ್ನು ತಿಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನನಗಿದ್ದು, ನಾನು ಸೋತೆ ಎಂದು ಮನೆಯಲ್ಲಿ ಕೂರದೇ ಅವಳಿ ತಾಲೂಕಿನಾದ್ಯಂತ ಪ್ರವಾಸ ಮಾಡುತ್ತಿದ್ದೇನೆ.
ಮುಂಬರುವ ಜಿಪಂ, ತಾಪಂ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ನಾವು ಪಕ್ಷ ಸಂಘಟನೆ ಮಾಡಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ,
ಮಾಜಿ ತಾಪಂ ಅಧ್ಯಕ್ಷ ಕೆ.ಎಲ್. ರಂಗನಾಥ್, ಕೆಎಸ್ಡಿಎಲ್ ಮಾಜಿ ನಿರ್ದೇಶಕ ಶಿವುಹುಡೇದ್, ಮುಖಂಡರಾದ ನರಸಿಂಹ, ಬಸವರಾಜ್,
ಹರ್ಷಪಟೇಲ್, ಬಸವರಾಜ್, ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯರಾದ ಕರಿಬಸಪ್ಪ, ರಮೇಶ್, ಶಿವಮೂರ್ತಿ,ಪಕ್ಷದ ಮುಖಂಡರಿದ್ದರು.