More

    ಶರಣರ ಬದುಕು ಸದಾ ಆದರ್ಶಮಯ

    ಮೈಸೂರು: ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾಗಿರಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.


    ಸುತ್ತೂರು ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಹಯೋಗದಲ್ಲಿ ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿ ಶರಣ ಸಂಸ್ಕೃತಿ ಕುರಿತು ಮಾತನಾಡಿದರು.


    ನಡೆ-ನುಡಿಗಳಲ್ಲಿ ಅಂತರವಿರದ ಜೀವನ ಶರಣರದಾಗಿತ್ತು. ಶರಣರು ಕರ್ಮ ಸಿದ್ಧಾಂತವನ್ನು ಕಾಯಕ ಸಿದ್ಧಾಂತವಾಗಿಸಿದವರು. ಅವರ ನಡೆ-ನುಡಿಗಳಲ್ಲಿ ಸಮನ್ವಯವಿತ್ತು. ಅರಿವು, ಆಚಾರದ ಬದುಕು ಅವರದಾಗಿತ್ತು. ಅವರ ವಚನಗಳು ಅಂತರಂಗದ ಅನುಭಾವದ ನುಡಿಗಳಾಗಿವೆ. ಜನವಾಣಿಯನ್ನು ದೇವವಾಣಿಯನ್ನಾಗಿಸಿದುದು ಶರಣ ಸಂಸ್ಕೃತಿ. ಕಾಯಕದಲ್ಲಿ ನಿರತನಾದೆಡೆ ಗುರುದರ್ಶನವಾದರು ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು ಎಂದು ಹೇಳುವ ಶರಣರ ಮಾತುಗಳು ಕಾಯಕಕ್ಕೆ ಅವರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತದೆ ಎಂದು ಹೇಳಿದರು.


    ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಪತ್ರಕರ್ತರಾದವರು ಸಾಮಾಜಿಕ ಬದ್ಧತೆಯನ್ನು ಹೊಂದಿರಬೇಕು. ಹಿಂದೆ ಪತ್ರಕರ್ತರ ಜವಾಬ್ದಾರಿ ಬಹಳ ಹೆಚ್ಚಾಗಿತ್ತು, ಅದನ್ನೇ ಧರ್ಮವನ್ನಾಗಿಸಿಕೊಂಡಿದ್ದರು. ಆದರೆ ಈಗ ಉದ್ಯಮವಾಗಿದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಜನರ ಮನೋಭಾವ ಮತ್ತು ಜೀವನ ಪದ್ಧತಿಯು ಬದಲಾಗಿದೆ ಎಂದು ಅಭಿಪ್ರಾಯಪಟ್ಟರು.


    ಮುದ್ರಣ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮ ಬಹಳ ಪರಿಣಾಮಕಾರಿಯಾಗಿ ಬೆಳೆದಿದೆ. ಪತ್ರಕರ್ತರಾದವರು ಸಕಾರಾತ್ಮಕ ಲೇಖನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪತ್ರಿಕಾ ಧರ್ಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.


    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿಯ ವಿರಕ್ತಮಠದ ಡಾ. ಶ್ರೀ ಮಹಾಂತ ಪ್ರಭುಸ್ವಾಮಿ ಮಾತನಾಡಿ, ಮನಸ್ಸನ್ನು ಪರಿಶುದ್ಧಗೊಳಿಸಿಕೊಂಡಲ್ಲಿ ನಿಶ್ಚಿಂತೆಯ ಬದುಕು ಸಾಧ್ಯ ಎಂದು ತಿಳಿಸಿದರು.


    ಮಾನವನು ನೆಮ್ಮದಿಯ ಜೀವನವನ್ನು ನಡೆಸಲು ಚಿಂತೆಯಿಂದ ವಿಮುಕ್ತನಾಗಬೇಕು. ಸದಾ ಪರಮಾತ್ಮನನ್ನು ಕುರಿತು ಆಲೋಚನೆ ಮಾಡುತ್ತಿದ್ದಲ್ಲಿ ಸಂತೋಷವನ್ನು ಕಾಣಲು ಸಾಧ್ಯ. ನಾವು ಜಗತ್ತಿನಲ್ಲಿರುವ ಸಕಲ ಜೀವ ರಾಶಿಗಳ ಮೇಲೆ ಪ್ರೇಮವನ್ನಿಟ್ಟುಕೊಳ್ಳುವುದೆ ತಪಸ್ಸಾಗಿದೆ. ನಿರ್ಮಲ ಮನಸ್ಸು ನಿಶ್ಚಿಂತೆ ಜೀವನಕ್ಕೆ ಕಾರಣವಾಗಿದೆ ಎಂದು ಹೇಳಿದರು.


    ಶಿಬಿರದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಎಸ್. ಪಿ. ಧನ್‌ಬಾಲ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts