ಮಂದಾರ್ತಿ: ರಾಜ್ಯದ ಆಯ್ದ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ಸರ್ಕಾರ ಮತ್ತು ದೇವಸ್ಥಾನ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಸಪ್ತಪದಿ ಸರಳ ಸಾಮೂಹಿಕ ವಿವಾಹ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆ ಮಕ್ಕಳ ಮದುವೆ ಮಾಡುವಾಗ ಯಾವ ರೀತಿ ಯೋಚಿಸುತ್ತೇವೋ ಅದೇ ರೀತಿ ಈ ಸರಳ ಸಾಮೂಹಿಕ ವಿವಾಹಕ್ಕೆ ಜನ ಸಹಕರಿಸಬೇಕು. ಸರ್ಕಾರದ ಆದೇಶಗಳನ್ನು ದೇವಸ್ಥಾನಗಳ ಮೂಲಕ ಅನುಷ್ಠಾನಗೊಳಿಸಬೇಕು. ರಥಕ್ಕೆ ಚಾಲನೆ ನೀಡಿ ಪ್ರಚಾರ ಮಾಡುವುದರಿಂದ ಜನರಿಗೆ ಸರಳ ವಿವಾಹದ ಕುರಿತು ತಿಳಿಯುತ್ತದೆ ಎಂದರು.
ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ, ಹೆಗ್ಗುಂಜೆ ಗ್ರಾಪಂ ಅಧ್ಯಕ್ಷ ಗಣೇಶ್ ಶೆಟ್ಟಿ, ಉದ್ಯಮಿ ಶೇಡಿಕೊಡ್ಲು ವಿಠಲ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಎಚ್.ಪ್ರಭಾಕರ ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ತಾಪಂ ಸದಸ್ಯೆ ನಿರ್ಮಲಾ ಎಸ್.ಶೆಟ್ಟಿ, ಅರ್ಚಕ ರಾಮ ಅಡಿಗ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಗಾನ ಭಾಗವತ ಉದಯ್ ಹೊಸಾಳ ಮತ್ತು ತಂಡ ಪ್ರಾರ್ಥಿಸಿ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್ ಸ್ವಾಗತಿಸಿದರು. ಪ್ರದೀಪ್ ಶೆಟ್ಟಿ ನಿರೂಪಿಸಿ, ಗಂಗಾಧರ ಶೆಟ್ಟಿ ವಂದಿಸಿದರು.
ಮಾರ್ಚ್ 27 ಕೊನೇ ದಿನ
ಮುಜರಾಯಿ ದೇವಳಗಳಲ್ಲಿ ಏಪ್ರಿಲ್ 26ರಂದು ಸಪ್ತಪದಿ ಸಾಮೂಹಿಕ ವಿವಾಹ ನಡೆಯಲಿದ್ದು, ಹೆಸರು ನೋಂದಾಯಿಸಲು ಮಾರ್ಚ್ 27 ಕೊನೇ ದಿನ. ವಧು-ವರರಿಗೆ ಹೂವಿನ ಹಾರ, ಕುರ್ತಾ, ಪೈಜಾಮ, ಶಾಲು, ಧಾರೆ ಸೀರೆ, ರವಿಕೆ ಕಣ, ಚಿನ್ನದ ತಾಳಿ, ಎರಡು ಗುಂಡು ಅಂದಾಜು ಮೊತ್ತ 55,000 ರೂ. ಹಾಗೂ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರೂ.10,000, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50,000 ನೀಡಲಾಗುತ್ತದೆ.