ಬೆಂಗಳೂರು: ‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಆ ಚಿತ್ರದ ನಾಯಕಿ ಸಪ್ತಮಿ ಗೌಡ ಮುಂದೇನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅವರು ಅಭಿಷೇಕ್ ಅಂಬರೀಷ್ ಅಭಿನಯದ ‘ಕಾಳಿ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.
ಇದನ್ನೂ ಓದಿ: ರಿಷಿ ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರಮೋಷನ್ ಪಡೆದ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ
ಹೌದು, ‘ಕಾಳಿ’ ಚಿತ್ರಕ್ಕೆ ಸಪ್ತಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದುವರೆಗೂ ಸಪ್ತಮಿ ಈ ವಿಷಯವಾಗಿ ಎಲ್ಲೂ ಮಾತನಾಡಿಲ್ಲ. ಈ ಕುರಿತು ನಿರ್ದೇಶಕ ಕೃಷ್ಣ ಅವರನ್ನು ಕೇಳಿದರೆ ಮಾತುಕತೆ ನಡೆಯುತ್ತಿರುವುದಾಗಿ ಹೇಳುತ್ತಾರೆ.
ಈ ವಿಷಯವಾಗಿ ‘ವಿಜಯವಾಣಿ’ ಜತೆಗೆ ಮಾತನಾಡಿದ ಕೃಷ್ಣ, ‘ಸಪ್ತಮಿ ಜತೆಗೆ ಮಾತುಕತೆ ನಡೆಯುತ್ತಿರುವುದು ಹೌದು. ಈಗಾಗಲೇ ಒಂದು ಸುತ್ತು ಮಾತುಕತೆಯಾಗಿದೆ. ಡೇಟ್ಸ್ ನೋಡಿಕೊಂಡು, ಮೂರ್ನಾಲ್ಕು ದಿನಗಳಲ್ಲಿ ನಾಯಕಿ ಆಯ್ಕೆ ಅಂತಿಮವಾಗಲಿದೆ’ ಎನ್ನುತ್ತಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಕಾಳಿ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಆರಂಭವಾಗಿರಬೇಕಿತ್ತು. ಆದರೆ, ಅಭಿಷೇಕ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಚಿತ್ರೀಕರಣ ವಿಳಂಬವಾಗಿದ್ದರಿಂದ, ‘ಕಾಳಿ’ ಸಹ ಸ್ವಲ್ಪ ಮುಂದಕ್ಕೆ ಹೋಗಿದೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆ ನಂತರ ‘ಕಾಳಿ’ ಚಿತ್ರೀಕರಣ ಶುರುವಾಗಲಿದೆ.
ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್: ಕಾರಣ ಈ ಒಂದು ವಿಡಿಯೋ….
‘ಕಾಳಿ’ ಚಿತ್ರದಲ್ಲಿ 90ರ ದಶಕದ ಕಥೆ ಇದ್ದು, ಕಾವೇರಿ ನದಿ ಹೋರಾಟದ ಹಿನ್ನೆಲೆಯಲ್ಲಿ ಕಥೆ ನಡೆಯಲಿದೆಯಂತೆ. ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ಮಿಸುತ್ತಿದ್ದು, ‘ಗಜಕೇಸರಿ’, ‘ಪೈಲ್ವಾನ್’, ‘ಹೆಬ್ಬುಲಿ’ ಚಿತ್ರಗಳನ್ನು ನಿರ್ದೇಶಿಸಿರುವ ಎಸ್. ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.