More

    ಪಿಡಬ್ಲುೃಡಿ ಇಲಾಖೆ ಇಂಜಿನಿಯರ್ ಮೇಲೆ ಹಲ್ಲೆ: ತಾಲೂಕು ಸರ್ಕಾರಿ ನೌಕರರ ಸಂಘ ಖಂಡನೆ

    ಸಂಡೂರು: ಪಟ್ಟಣದ ಪಿಡಬ್ಲುೃಡಿ ಇಲಾಖೆ ಸಹಾಯಕ ಇಂಜಿನಿಯರ್ ಮೈಸೂರು ಲೋಕೇಶ್ ಮೇಲಿನ ಹಲ್ಲೆ ಖಂಡಿಸಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ತೋರಣಗಲ್ ನಾಡ ಕಚೇರಿ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಚೌಕುಳಿ ಪರಶುರಾಮಪ್ಪ ಮಾತನಾಡಿ, ಅ.14ರಂದು ಪಿ.ವಿನಯಕುಮಾರ್ ಮತ್ತು ವಿಜಯಕುಮಾರ್ ಎಂಬುವರು ಬುಜಂಗನಗರ ಬೈಪಾಸ್ ರಸ್ತೆಗೆ ಸಂಬಂಧಿಸಿದ ನಕಾಶೆ ಕೋರಿ ಲೋಕೋಪಯೋಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅ.25ರಂದು ಕಚೇರಿಗೆ ತೆರಳಿ ಲೋಕೇಶ್ ಬಳಿ ಅರ್ಜಿ ವಿಲೇವಾರಿ ಬಗ್ಗೆ ಕೇಳಿದ್ದಾರೆ. ಇದಕ್ಕವರು ಇನ್ನೂ ಎರಡ್ಮೂರು ದಿನ ತಡವಾಗಬಹುದು ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿನಯಕುಮಾರ್ ಮತ್ತು ವಿಜಯಕುಮಾರ್ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಲಗೈ ಹೆಬ್ಬೆರಳು ಮುರಿದ ಕಾರಣ ಹೊಸಪೇಟೆಯಲ್ಲಿ ಚಿಕಿತ್ಸೆ ನೀಡಿರುವ ವೈದ್ಯರು 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ.

    ಪದೇಪದೆ ಹಲ್ಲೆಗಳು, ದಬ್ಬಾಳಿಕೆ ನಡೆಯುತ್ತಿರುವುದರಿಂದ ಕಚೇರಿಗಳಲ್ಲಿ ನೌಕರರು ಆತಂಕದಲ್ಲಿ ಕೆಲಸ ನಿರ್ವಹಿಸುವಂತಾಗಿದ್ದು, ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

    ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿ, ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಮೂಲಕ ಪತ್ರ ರವಾನಿಸುವುದಾಗಿ ತಿಳಿಸಿದರು.

    ಪಿಡಬ್ಲುೃಡಿ ಎಇಇ ಕೃಷ್ಣ್ಣಾನಾಯ್ಕ, ಬಿಇಒ ಮೈಲೇಶ್ ಬೇವೂರು, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಂ.ಎಂ.ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts