ಸಂಡೂರು: ಇಲ್ಲಿನ ರಸ್ತೆಗಳು ಚೆನ್ನಾಗಿ ಇರಲಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಯುವಕರಿಗೆ ಹೆಣ್ಣು ಕೊಡುತ್ತಿರಲಿಲ್ಲ ಎಂದು ಕೆಆರ್ಪಿಪಿ ತಾಲೂಕು ಅಧ್ಯಕ್ಷ ಪಿ.ವಿ.ಶ್ರೀನಿವಾಸಲು ಹೇಳಿದರು.
ರಸ್ತೆ ನಿರ್ಮಾಣಕ್ಕೆ ಜನಾರ್ದನ ರೆಡ್ಡಿ ಭೂಮಿ ಪೂಜೆ
ಪಟ್ಟಣದ ಸ್ಕಂದಪುರ ಲೇಔಟ್ನಲ್ಲಿ (ಕಾಲ್ಪಟ್ಟಿಯಲ್ಲಿ) ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದರು. 2008-09ರಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರಿಂದ ಸಂಡೂರು-ಹೊಸಪೇಟೆ, ತೋರಣಗಲ್-ಕೂಡ್ಲಿಗಿ ರಸ್ತೆಗಳ ನಿರ್ಮಾಣಕ್ಕೆ ಜನಾರ್ದನ ರೆಡ್ಡಿ ಭೂಮಿ ಪೂಜೆ ಮಾಡಿಸಿದ್ದರು. ಎಲ್ಲ ಗಣಿ ಕಂಪನಿಗಳ ನೆರವಿನೊಂದಿಗೆ ಕುಮಾರಸ್ವಾಮಿ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿದ್ದರು ಎಂದರು.
ಇದನ್ನೂ ಓದಿ: RTO ಅಧಿಕಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಫರ್ ನೀಡಿದ ಜನಾರ್ದನ ರೆಡ್ಡಿ!
ಮನಸ್ಸಲ್ಲಿದ್ದಂತೆ ಪ್ರತ್ಯೇಕ ಪಕ್ಷ ಸ್ಥಾಪನೆ
ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಗಾಲಿ ಜನಾರ್ದನ ರೆಡ್ಡಿ ಪ್ರಮುಖ ಪಾತ್ರವಹಿಸಿದ್ದರು. ಅವರ ಮನಸ್ಸಲ್ಲಿದ್ದಂತೆ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿದ್ದಾರೆ. ಗಂಗಾವತಿಯಲ್ಲಿ ಜ.23ರಂದು ಪಕ್ಷ ಆರಂಭವಾಗಿದೆ ಎಂದರು.
ಪಕ್ಷದ ಜಿಲ್ಲಾ ಒಬಿಸಿ ಅಧ್ಯಕ್ಷ ಎಂ.ತಿರುಮಲ ಮಾತನಾಡಿ, 12 ವರ್ಷ ವನವಾಸದ ಬಳಿಕ ಜನಾರ್ದನ ರೆಡ್ಡಿ ಕೆಆರ್ಪಿಪಿ ಕಟ್ಟಿದ್ದಾರೆ. ಅಂತಹ ಗಟ್ಟಿ ಮನುಷ್ಯನ ಜತೆ ನಾವಿದ್ದೇವೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಉದ್ದೇಶ ಎಂದರು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ಎಸ್.ಎನ್.ನರಸಿಂಹ, ತಾಲೂಕು ಉಪಾಧ್ಯಕ್ಷ ಬಸವರಾಜ್ ದೇಸಾಯಿ, ಸಾಮಾಜಿಕ ಜಾಲತಾಣ ಉಸ್ತುವಾರಿ ವಿನಾಯಕ್, ಯಶವಂತನಗರದ ಗ್ರಾಪಂ ಸದಸ್ಯ ಅಂಜಿನಪ್ಪ, ಕೆಂಚಪ್ಪ, ಬೊಮ್ಮಘಟ್ಟ, ಹುಲೇಶಿ, ತಾರಾನಗರ ದೊಡ್ಡನಗೌಡ, ಕೃಷ್ಣಾ, ಯು.ರಾಜಾಪುರದಿಂದ ಬಸವರಾಜು, ಪರಸಪ್ಪ, ಮಹಿಳಾ ಮೋರ್ಚಾದ ಮಂಗಳಗೌರಿ, ಶ್ರುತಿ, ಸೌಮ್ಯಾ ಇತರಿದ್ದರು.