ಸಂಡೂರು: ಸುಳ್ಳು ಹೇಳಿಕೆಗಳ ಮೂಲಕ ಕಾಂಗ್ರೆಸ್ನವರು ಎಸ್ಸಿ/ಎಸ್ಟಿ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಟಿ. ಪಂಪಾಪತಿ ಹೇಳಿದರು.
ಪಟ್ಟಣದ ವಿಜಯ ಸರ್ಕಲ್ ಬಳಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ದಲಿತ ಸೇನೆ, ಮಾದಿಗ ದಂಡೋರ ಸಮಿತಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಸೋಮವಾರ ಮಾತನಾಡಿದರು.
ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ ಎಂದು ಕಾಂಗ್ರೆಸ್ನವರು ಕಿವಿ ಕಚ್ಚುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ರವರ ಶವಸಂಸ್ಕಾರಕ್ಕೂ ಜಾಗ ಕೊಡದದವರ ಮಾತನ್ನು ಯಾರೂ ಕೇಳಬೇಡಿ. ಶಾಸಕ ಈ. ತುಕಾರಾಮ್, ಕಾಂಗ್ರೆಸ್ ಮುಖಂಡರು ಹಾಗೂ ನಾಲ್ವರು ಹಿಂಬಾಲಕರನ್ನು ಇಟ್ಟುಕೊಂಡು ಪ್ರೊಟೋಕಾಲ್ ಪಾಲಿಸದೆ ಗುದ್ದಲಿ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ ಎಂದು ದೂರಿದರು.
ದಲಿತಸೇನೆ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ತಾಯಪ್ಪ, ಮಾದಿಗ ದಂಡೋರ ಸಮಿತಿ ತಾಲೂಕು ಅಧ್ಯಕ್ಷ ದೌಲತ್ಪುರ ಸತೀಶ್ ಮಾತನಾಡಿದರು. ದಲಿತ ಸೇನೆ ತಾಲೂಕು ಅಧ್ಯಕ್ಷ ರಾಜೇಶ್ ಹೆಗಡೆ, ಮಾದಿಗ ದಂಡೊರಾದ ತಾಲೂಕು ಅಧ್ಯಕ್ಷ ಸತೀಶ್ ಹೆಗಡೆ, ರೈತ ಸಂಘದ ಜಿಲ್ಲಾಧ್ಯಕ್ಷರಾದ ಎಂಎಲ್ಕೆ ನಾಯ್ಡು, ಶ್ರೀಪಾದಸ್ವಾಮಿ, ರಮೇಶ್, ಕುಮಾರಸ್ವಾಮಿ, ಹನುಮಂತಪ್ಪ ವೈಟಿಜಿ, ಷಣ್ಮುಖಪ್ಪ, ಹೊನ್ನೂರು ಸ್ವಾಮಿ, ದಾದಾ ಕಲಂದರ್, ಸಂತೋಷ್, ರುದ್ರೇಶ್, ಲಕ್ಷ್ಮೀಪುರ ಗೋವಿಂದಪ್ಪ ಮುಂತಾದವರಿದ್ದರು.