ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿ ತನಿಖೆ ನಡೆಸಿ ವರದಿ ನೀಡುವಂತೆ ಐವರ ತಂಡವನ್ನು ರಚಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲೀನ್ಯ ನಿಯಂತ್ರಣ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದ್ದು, ನ.11ರೊಳಗೆ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ದೇವದುರ್ಗ ತಾಲೂಕಿನಲ್ಲಿ ಟೆಂಡರ್ ಕರೆದು 17 ಬ್ಲಾಕ್ಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಗುತ್ತಿಗೆದಾರರಾದ ಆನಂದ ದೊಡ್ಡಮನಿ, ಪಿ.ಸಿ.ಕಾಂಬ್ಳೆ ನಿಯಮ ಉಲ್ಲಂಘಿಸಿ ಹಿಚಾಚಿ ಬಳಸಿ ನದಿಯಿಂದ ಮರಳು ತೆಗೆಯುವುದರ ಜತೆಗೆ 12 ಟನ್ಗೆ ರಾಯಲ್ಟಿ ಕಟ್ಟಿ 40 ಟನ್ ಮರಳನ್ನು ಸಾಗಣೆ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ ಎಂದರು.
ಈ ಕುರಿತು ದಾಖಲೆಗಳ ಸಮೇತ ಶ್ರೀರಾಮ ಸೇನೆ, ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಮಾಜಿ ಶಾಸಕ ಸಾರ್ವಭೌಮ ಬಗಲಿ ಹಸಿರು ನ್ಯಾಯಪೀಠಕ್ಕೆ ದೂರನ್ನು ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ 8 ಸೂತ್ರಗಳ ಆದೇಶವನ್ನು ನೀಡಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ತನಿಖೆಗೆ ಸಮಿತಿಯನ್ನು ರಚನೆ ಮಾಡಿದೆ. ಅಕ್ರಮ ಮರಳು ಸಾಗಣೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ತಂಡದಲ್ಲಿ ಅಧಿಕಾರಿಗಳು ಇರುವುದರಿಂದ ನ್ಯಾಯಯುತ ವರದಿ ನೀಡುವ ಸಾಧ್ಯತೆಗಳು ಕಡಿಮೆಯಿದ್ದರೂ ನಾವು ನೀಡಿರುವ ದಾಖಲೆಗಳನ್ನು ನ್ಯಾಯಾಲಯ ಮನ್ನಣೆ ಮಾಡಲಿದೆ ಎನ್ನುವ ಆಶಾಭಾವವಿದೆ ಎಂದರು. ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಬಾವಿ, ಪದಾಧಿಕಾರಿಗಳಾದ ವಿಜಯ ಪಾಟೀಲ್, ಮಲ್ಲನಗೌಡ ಮಾಲಿಪಾಟೀಲ್, ಶರಣಪ್ಪ ರೆಡ್ಡಿ ಉಪಸ್ಥಿತರಿದ್ದರು.