ಮುಂಬೈ: ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಕೇಸಿನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ರ ಮಗ ಆರ್ಯನ್ ಖಾನ್ ಬಂಧಿಸಲ್ಪಟ್ಟಾಗಿನಿಂದ ಭಾರೀ ಚರ್ಚೆಯಲ್ಲಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ಅಧಿಕಾರಿಯೆಂದರೆ ವಲಯ ನಿರ್ದೇಶಕರಾಗಿರುವ ಸಮೀರ್ ವಾಂಖೇಡೆ. ಇದೀಗ ಅವರು ಈ ಡ್ರಗ್ಸ್ ಕೇಸಿನ ತನಿಖಾಧಿಕಾರಿಯಲ್ಲ ಎಂದು ಎನ್ಸಿಪಿ ದೆಹಲಿ ಉಪಮಹಾನಿರ್ದೇಶಕ(ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ಡ್ರಗ್ಸ್ ಕೇಸಿನ ಸ್ವತಂತ್ರ ಸಾಕ್ಷಿ ಎನ್ನಲಾದ ಪ್ರಭಾಕರ್ ಸೈಲ್ ಸುಲಿಗೆ ಮತ್ತು ಹಣ ವಸೂಲಿ ಆರೋಪಗಳನ್ನು ಮಾಡಿದ್ದಾರೆ, ಈ ಬಗ್ಗೆ ಈಗಾಗಲೇ ಮುಂಬೈ ಪೊಲೀಸರು ವಾಂಖೇಡೆ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಎನ್ಸಿಬಿ ಕೂಡ ಅವರ ವಿರುದ್ಧ ಇಲಾಖೆ ಮಟ್ಟದ ವಿಜಿಲೆನ್ಸ್ ತನಿಖೆ ಆರಂಭಿಸಿದ್ದು, ಡಿಡಿಜಿ ಜ್ಞಾನೇಶ್ವರ್ ಸಿಂಗ್ ಆ ತನಿಖೆಯ ಜವಾಬ್ದಾರಿ ಹೊತ್ತಿದ್ದಾರೆ. ಹೀಗಿರುವಾಗ ಸಮೀರ್ ವಾಂಖೇಡೆ ಅವರೇ ಆರ್ಯನ್ ಆರೋಪಿಯಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಕೇಸಿನ ಸೂತ್ರಧಾರಿ ಎಂದು ಬಿಂಬಿಸಲಾಗುತ್ತಿರುವ ಮತ್ತು ಅವರ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಸಿಂಗ್, ಇಂದು ಸುದ್ದಿಗಾರರಿಗೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಂದಿನ ಏಪ್ರಿಲ್ನಿಂದ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳೋಲ್ಲ! ಹೀಗೆಂದವರು ಯಾರು, ಏಕೆ?
“ಸಮೀರ್ ವಾಂಖೆಡೆ ಈ ಪ್ರಕರಣದ ತನಿಖಾಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇನೆ. ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದರು. ಅವರ ಮೇಲೆ ಡಿಡಿಜಿ ಇದ್ದಾರೆ ಮತ್ತು ಡಿಡಿಜಿ ಮೇಲೆ ಡಿಜಿ ಇದ್ದಾರೆ. ಹಾಗಾಗಿ ಆ ಸರಣಿಯಲ್ಲಿ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿ.ವಿ.ಸಿಂಗ್ ತನಿಖಾಧಿಕಾರಿಯಾಗಿದ್ದಾರೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ ನಂತರ, ಅದರ ಆಧಾರದ ಮೇಲೆ ಡಿಜಿ ಅವರು ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ” ಎಂದು ಡಿಡಿಜಿ ಸಿಂಗ್ ವಿವರಿಸಿದ್ದಾರೆ.
ವಾಂಖೆಡೆ ಮತ್ತು ಇನ್ನೋರ್ವ ಸಾಕ್ಷಿ ಕಿರಣ್ ಗೋಸಾವಿ ವಿರುದ್ಧ ಪ್ರಭಾಕರ್ ಸೈಲ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಸೈಲ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ಮಾಡಿರುವ ಎಲ್ಲಾ ಆರೋಪಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸೈಲ್ ಅವರಿಗೆ ಕರೆ ನೀಡಿದ್ದೇವೆ. ಗೋಸಾವಿ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಬುಧವಾರದಂದು, ಸಮೀರ್ ವಾಂಖೇಡೆ ಅವರನ್ನು ಎನ್ಸಿಬಿ ವಿಜಿಲೆನ್ಸ್ ತಂಡ ಹಲವು ಗಂಟೆಗಳ ಕಾಲ ವಿಚಾರಣೆ ಮಾಡಿದೆ. (ಏಜೆನ್ಸೀಸ್)
ರಾಖಿ ಕಟ್ಟಿದ ಹುಡುಗಿಯನ್ನೇ ಹಾರಿಸಿಕೊಂಡು ಹೋದ! ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ