ನವದೆಹಲಿ: ಉಗ್ರರ ಸ್ವರ್ಗ ಪಾಕಿಸ್ತಾನದಲ್ಲಿ ಪಾಕ್ ಸರ್ಕಾರದ ಬಿಗಿ ಭದ್ರತೆಯಲ್ಲಿ ಕುಳಿತ ವ್ಯಕ್ತಿಯೊಬ್ಬ 26/11ರ ಮುಂಬೈ ಮೇಲಿನ ಉಗ್ರರ ದಾಳಿ ಸೇರಿ 3 ಖಂಡಗಳಲ್ಲಿ ವಿವಿಧ ಭಯೋತ್ಪಾದನಾ ದಾಳಿಗಳನ್ನು ಸಂಘಟಿಸಿದ್ದ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಪಾಕಿಸ್ತಾನದ ಸೇನಾಪಡೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದ ಸಾಜೀದ್ ಮೀರ್ ಎಂಬಾತ ಆ ಕೆಲಸ ಬಿಟ್ಟು ಲಷ್ಕರ್ ಎ ತೊಯ್ಬಾ ಭಯೋತ್ಪಾದನಾ ಸಂಘಟನೆ ಸೇರಿಕೊಂಡ ನಂತರದಲ್ಲಿ ಈ ಎಲ್ಲ ಸಂಚುಗಳನ್ನು ರೂಪಿಸಿದ್ದ ಎನ್ನಲಾಗಿದೆ.
ಭಾರತ ಅಷ್ಟೇ ಅಲ್ಲ, ಆಸ್ಟ್ರೇಲಿಯಾ, ಅಮೆರಿಕದ ವರ್ಜೀನಿಯಾ ಮತ್ತು ಫ್ರಾನ್ಸ್ನಲ್ಲಿ ಈ ದಾಳಿಗಳು ನಡೆದಿದ್ದವು. 2001ರಲ್ಲಿ ಲಷ್ಕರ್ ಭಯೋತ್ಪಾದನೆ ಸಂಘಟನೆಯ ವಿದೇಶಿ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಫ್ರಾನ್ಸ್ನ ವಿಲ್ಲಿ ಬ್ರಿಗಿಟ್ಟೆ ಕೂಡ ಸಾಜೀದ್ನ ಶೋಧವಾಗಿದ್ದ. ಈತನ ಸಹಕಾರದಲ್ಲಿ 5 ವರ್ಷ ಮೊದಲೇ 2008ರ 26/11ರ ಮುಂಬೈ ಮೇಲಿನ ಉಗ್ರರ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿದೆ.
2003ರ ಅಕ್ಟೋಬರ್ನಲ್ಲಿ ಫ್ರಾನ್ಸ್ನಲ್ಲಿ ಬಾಂಬ್ ಸ್ಫೋಟಿಸುವ ಸಂಚು ರೂಪಿಸುತ್ತಿರುವಾಗ ವಿಲ್ಲಿ ಬ್ರಿಗಿಟ್ಟೆ ಮತ್ತು ಆತನ ಸಹಚರ ಪಾಕ್ ಮೂಲದ ವಾಸ್ತುಶಿಲ್ಪ ಇಂಜಿನಿಯರ್ ಫಹೀಂ ಖಲೀದ್ ಲೂದಿ ಎಂಬಾತನನ್ನು ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದ ಗುಪ್ತಚರ ವಿಭಾಗದ ಸಿಬ್ಬಂದಿ ಬಂಧಿಸಿದ್ದರು.
ಇದನ್ನೂ ಓದಿ: ಬೆಳ್ಳಿ ಗದೆ ಪಡೆದು ಮಿಂಚಿದ್ದ ಉಡುಪಿ ಜಿಲ್ಲಾಧಿಕಾರಿಗೆ ಜಗದೀಶ್ಗೆ ಶುರುವಾಯ್ತು ಸಂಕಷ್ಟ..!
ಆಗ ವಿಚಾರಣೆ ವೇಳೆ ಬ್ರಿಗಿಟ್ಟೆ ಲಷ್ಕರ್ ಜುಗ್ರ ಸಾಜೀದ್ ಮೀರ್ ಬಗ್ಗೆ ಸಾಕಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದ ಎನ್ನಲಾಗಿದೆ. ಆಗ ಸಾಜೀದ್ ಲಾಹೋರ್ನ ಹೊರಭಾಗದಲ್ಲಿರುವ ಲಷ್ಕರ್ನ ಮುಖ್ಯ ಕೇಂದ್ರದಲ್ಲಿ ವಿದೇಶಿ ಉಗ್ರರ ನೇಮಕಾತಿಯ ಜವಾಬ್ದಾರಿ ಹೊತ್ತಿದ್ದ ಎನ್ನಲಾಗಿದೆ. ಅಲ್ಲದೆ, ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಲಷ್ಕರ್ನ ಪ್ರಮುಖ ಉಗ್ರ ಝಾಕಿ ಉರ್ ರೆಹಮಾನ್ ಲಖ್ವಿ ಜತೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಕ್ರಿಕೆಟ್ ಪ್ರಿಯನ ಸೋಗಿನಲ್ಲಿ 2005ರಲ್ಲಿ ಭಾರತಕ್ಕೆ ಬಂದಿದ್ದ ಈತ ದೆಹ್ರಾಡೂನ್ನ ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಸ್ಥಳಾನ್ವೇಷಣೆ ನಡೆಸಿ ಸಂಪೂರ್ಣ ಮಾಹಿತಿ ಕಲೆಹಾಕಿಕೊಂಡಿದ್ದ ಎನ್ನಲಾಗಿದೆ.
ಅಮೆರಿಕದ ಬೇಹುಗಾರಿಕೆ ಪಡೆಗಳು ನಡೆಸಿದ್ದ ತನಿಖೆಯಲ್ಲಿ ಈತ 26/11ರ ಮುಂಬೈ ದಾಳಿಯ ಸಂಚು ರೂಪಿಸಿದ್ದು, ಚಾಬಾದ್ ಹೌಸ್ನಲ್ಲಿ ಹೋಲ್ಟ್ಜ್ಬರ್ಗ್ ದಂಪತಿಯ ಹತ್ಯೆ ಮಾಡಿಸಿದ್ದು ಸೇರಿ ಪ್ರತಿಯೊಂದು ಹಂತದಲ್ಲೂ ಈತನ ಕೈವಾಡ ಇತ್ತು ಎಂಬುದು ಪತ್ತೆಯಾಗಿತ್ತು.
ಇದನ್ನೂ ಓದಿ: ‘ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ..’ ಧ್ವನಿ ಬಿಟ್ಟು ಮರೆಯಾದ ಉಷಾ
ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಗುಪ್ತಚರ ವಿಭಾಗದ ಅಧಿಕಾರಿಗಳು 2009ರಲ್ಲಿ ಬಂಧಿಸಿದ್ದರು. ಆಗ ಸಾಜೀದ್ ಮೀರ್ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಬಗ್ಗೆ ಮಾಹಿತಿ ಕೊಡುವವರಿಗೆ 37 ಕೋಟಿ ರೂ. ಬಹುಮಾನ ಕೊಡುವುದಾಗಿ ಅಮೆರಿಕ 2012ರಲ್ಲಿ ಘೋಷಿಸಿತ್ತು. ಈ ಬಹುಮಾನವನ್ನು ಪಡೆದುಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಆತ ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್ಐನ ಬಿಗಿ ಭದ್ರತೆಯಲ್ಲಿ ಇರುವುದು ಇದಕ್ಕೆ ಕಾರಣ.
ಭಾರತೀಯ ಭದ್ರತಾ ಅಧಿಕಾರಿಗಳ ಪ್ರಕಾರ ಸಾಜೀದ್ ಮೀರ್ಗೆ ಐಎಸ್ಐ 7ನೇ ಮಟ್ಟದ ಭದ್ರತೆಯಲ್ಲಿ ಇರಿಸಿದೆ. ಅಂದರೆ, ಪಾಕಿಸ್ತಾನಕ್ಕೆ ಭೇಟಿ ಕೊಡುವ ವಿದೇಶಿ ನಾಯಕರಿಗೆ ಒದಗಿಸುವ ಭದ್ರತೆ ಮಟ್ಟದ ಭದ್ರತೆಯನ್ನು ಆತನಿಗೆ ಒದಗಿಸಲಾಗಿದೆ.
ತೆಲಂಗಾಣ ಗೃಹ ಸಚಿವರಿಗೆ ಕೊವಿಡ್-19 ಸೋಂಕು; ಆಸ್ಪತ್ರೆಗೆ ದಾಖಲು