ಕಾನ್ಪುರ: ಮಣ್ಣು ರಕ್ಷಿಸಿ ಅಭಿಯಾನ ಹಮ್ಮಿಕೊಂಡಿರುವ ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು, ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನೂರು ದಿನಗಳ ಏಕಾಂಗಿ ಬೈಕ್ ಪ್ರಯಾಣ ನಡೆಸುತ್ತಿದ್ದಾರೆ. ಅದರ 80ನೇ ದಿನದಂದು ಐಐಟಿ-ಕಾನ್ಪುರದ ವಿದ್ಯಾರ್ಥಿಗಳು ‘ಯೂತ್ ಅಂಡ್ ಟ್ರೂತ್’ ಅಧಿವೇಶನಕ್ಕಾಗಿ ಕ್ಯಾಂಪಸ್ನಲ್ಲಿ ಸದ್ಗುರು ಅವರನ್ನು ಸ್ವಾಗತಿಸಿದರು.
ಝಾನ್ಸಿಗೆ ಹೋಗುವ ಮಾರ್ಗದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಸಂವಾದಾತ್ಮಕ ಪ್ರಶ್ನೋತ್ತರ ಅವಧಿಯಲ್ಲಿ ಸದ್ಗುರು ಭೇಟಿಯಾದರು. ಮಾನಸಿಕ ಆರೋಗ್ಯದಿಂದ ಹಿಡಿದು ಗಾಂಜಾವನ್ನು ಕಾನೂನುಬದ್ಧಗೊಳಿಸುವುದು, ಆಧುನಿಕ ದಿನದ ಶಿಕ್ಷಣತಜ್ಞರ ಪಾತ್ರ ಮತ್ತು ಇನ್ನೂ ಹೆಚ್ಚಿನ ವ್ಯಾಪಕವಾದ ವಿಷಯಗಳ ಬಗ್ಗೆ ಸದ್ಗುರು ಮಾತನಾಡಿದರು.
ಅತ್ಯಂತ ಉತ್ಸಾಹದ ಎರಡು ಗಂಟೆಗಳ ಅಧಿವೇಶನದಲ್ಲಿ ಐಐಟಿ-ಕಾನ್ಪುರದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸದ್ಗುರು, ಪ್ರತಿಷ್ಠೆಯ ಸಾಮಾಜಿಕ ನಿಯಮಗಳ ಆಧಾರದ ಮೇಲೆ ವೃತ್ತಿಯನ್ನು ಆರಿಸಿಕೊಳ್ಳುವುದಕ್ಕಿಂತ ಪೂರ್ಣ ಹೃದಯದಿಂದ, ಸಮರ್ಪಣಾ ಭಾವದಿಂದ ಏನನ್ನಾದರೂ ಮಾಡುವ ಮಹತ್ವದ ಬಗ್ಗೆ ಗಮನ ಸೆಳೆದರು.
ಮಾನಸಿಕ ಆರೋಗ್ಯದ ಕುರಿತು ವಿದ್ಯಾರ್ಥಿ ಸಮಿತಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ನಮ್ಮೊಳಗೆ ಯಾವುದೇ ಅನುಭವ ಸಂಭವಿಸಿದರೂ ಅದು ಮೂಲಭೂತವಾಗಿ ನಮ್ಮ ಜವಾಬ್ದಾರಿಯಾಗಿದೆ ಎಂದರು. ಅಂತಹ ಸಮಸ್ಯೆಗಳನ್ನು ಪರಿಹರಿಸಲು ಈ ಜವಾಬ್ದಾರಿಯನ್ನು ಹೊಂದುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು ಮತ್ತು ಪ್ರತಿ ಜೀವವು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಲು ಬೇಕಾದ ಮೂಲಭೂತ ಹಂಬಲದ ಕುರಿತು ಮಾತನಾಡಿದರು.
ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬ ಹಳೆಯ ಚರ್ಚೆಗೆ, ಸದ್ಗುರುಗಳು ಅದರ ಪ್ರಭಾವವನ್ನು ‘ಏರುವುದು’ ಎಂದು ಕರೆಯುವ ಬದಲು ‘ಇಳಿಯುವುದು’ ಎಂದು ಕರೆಯಬೇಕು ಎಂದು ಅಭಿಪ್ರಾಯಪಟ್ಟರು. ಏಕೆಂದರೆ ಅದು ಒಬ್ಬರ ಗ್ರಹಣ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದರು. ಅವರು ’ನಾನು ಗಾಂಜಾದ ವಿರುದ್ಧ ಅಲ್ಲ ಆದರೆ ಅಸಮರ್ಥ ಜೀವನದ ವಿರುದ್ಧ’ ಎಂದು ವಿವರಿಸಿದರು.
ಅಂತರ್ಮುಖಿಗಳು ಸಾಮಾಜಿಕವಾಗಿ ಬೆರೆಯಲು ಎದುರಿಸುವ ಒತ್ತಡಗಳ ಕುರಿತಾದ ಪ್ರಶ್ನೆಗೆ, ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಸದ್ಗುರು ಎತ್ತಿ ತೋರಿಸಿದರು, ಅದು ಅಚ್ಚಿನಂತೆ ಸ್ಥಿರ ವ್ಯಕ್ತಿತ್ವವನ್ನು ಹೊಂದಿರುವುದಕ್ಕಿಂತ ಪರಿಸ್ಥಿತಿಗೆ ಅಗತ್ಯವಿರುವಂತೆ ಹೇಗೆ ಇರಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಡುತ್ತದೆ ಎಂದರು.
ಸಭಿಕರಿಂದ ಹಲವಾರು ಕುತೂಹಲಕಾರಿ ಪ್ರಶ್ನೆಗಳ ನಂತರ, ಐಐಟಿ-ಕಾನ್ಪುರದ ವಿದ್ಯಾರ್ಥಿಗಳಿಗೆ ನಮ್ಮ ಜೀವನವನ್ನು ಪೋಷಿಸಿದ ಮಣ್ಣಿಗಾಗಿ ಧ್ವನಿ ಎತ್ತುವಂತೆ ಸದ್ಗುರು ಮನವಿ ಮಾಡುವ ಮೂಲಕ ಅಧಿವೇಶನವನ್ನು ಮುಕ್ತಾಯಗೊಳಿಸಿದರು. ನಮ್ಮ ಸುತ್ತ ಇರುವ ಬದುಕು ಮತ್ತು ನಮ್ಮನ್ನು ಮೀರಿ ಇರಬೇಕಾದ ಬದುಕಿನ ಬಗ್ಗೆ ನಮ್ಮ ಕಾಳಜಿ ಮತ್ತು ಜವಾಬ್ದಾರಿಯ ದ್ಯೋತಕವಾಗಿ ಇದು ಜೀವನಪರ್ಯಂತ ಪ್ರೇಮ ಸಂಬಂಧವಾಗಬೇಕು ಎಂದು ಆಗ್ರಹಪಡಿಸಿದರು.
ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್!