ಬಾಳೆಹೊನ್ನೂರು: ರಾಜ್ಯ ಸರ್ಕಾರ ದತ್ತಪೀಠದ ಹಿಂದು ಅರ್ಚಕರ ನೇಮಕಾತಿ ಆದೇಶದ ನಂತರ ಇದುವರೆಗೂ ಜಿಲ್ಲಾಡಳಿತ ಅರ್ಚಕರ ಸಂಭಾವನೆ ನೀಡದೇ ಮುಜಾವರ್ಗೆ ಮಾತ್ರ ವೇತನ ನೀಡುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಆರೋಪಿಸಿದರು.
ರಾಜ್ಯಸರ್ಕಾರ ತನ್ನ ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದು, ಇದು ಹೀಗೆ ಮುಂದುವರಿದರೆ ವಿಶ್ವ ಹಿಂದು ಪರಿಷತ್, ಬಜರಂಗಳದಿಂದ ರಾಜ್ಯಾದ್ಯಂತ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಜೋಳಿಗೆ ಅಭಿಯಾನ ಆರಂಭಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಈ ಹಿಂದೆ ಸರ್ಕಾರ ಕೋರ್ಟ್ ಆದೇಶದಂತೆ 2023ರ ಮಾರ್ಚ್ನಲ್ಲಿ ದತ್ತಪೀಠಕ್ಕೆ ಇಬ್ಬರು ಅರ್ಚಕರನ್ನು ನೇಮಿಸಿದೆ. ಅಂದಿನಿಂದ ಇಂದಿನವರೆಗೂ ಆಗಮ ಪದ್ಧತಿಯ ಪ್ರಕಾರ ದತ್ತಪೀಠದಲ್ಲಿ ತ್ರಿಕಾಲ ಪೂಜೆ ನೆರವೇರುತ್ತಿದೆ. ಆದರೆ ಇದುವರೆಗೂ ಅರ್ಚಕರಿಗೆ ಯಾವುದೇ ಸಂಭಾವನೆ ಹಣ ನೀಡಿಲ್ಲ. ಈ ಕುರಿತು ಸರ್ಕಾರ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ದತ್ತಪೀಠ ವ್ಯವಸ್ಥಾಪನಾ ಸಮಿತಿಗೆ ಹಲವು ಬಾರಿ ಮನವಿ ಮಾಡಿದರೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಿದರು.
ಮೂಲತಃ ದತ್ತಪೀಠ ಹಿಂದುಗಳ ಶ್ರದ್ಧಾಕೇಂದ್ರ. ಇಲ್ಲಿ ಆಗಮ ಪದ್ಧತಿ ಪ್ರಕಾರ ನಿತ್ಯ ಪೂಜೆ ನೆರವೇರಿಸಲು ದಿನನಿತ್ಯ ಪೂಜಾ ಸಾಮಾಗ್ರಿಗಳ ಅಗತ್ಯವಿರುತ್ತದೆ. ಆದರೆ ಜಿಲ್ಲಾಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಇದುವರೆಗೂ ಒಂದೂ ಪೂಜಾ ಸಾಮಾಗ್ರಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಉದ್ದೇಶ ಪೂರ್ವಕವಾಗಿ ಹಿಂದುಗಳ ಧಾರ್ಮಿಕ ಆಚರಣೆಗೆ ಅಡಚಣೆ ತರುವ ಉದ್ದೇಶದಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಚುನಾವಣಾ ನೀತಿ ಸಂಹಿತೆ ಮುಗಿದ ತಿಂಗಳ ಒಳಗೆ ಅರ್ಚರಕರ ಸಂಭಾವನೆ ಹಣ ನೀಡದಿದ್ದರೆ ಸರ್ಕಾರ, ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನಾ ಸಮಿತಿ ವಿರುದ್ಧ ವಿಹಿಂಪ, ಬಜರಂಗದಳ ರಾಜ್ಯ ವ್ಯಾಪ್ತಿ ಅರ್ಚಕರ ಸಂಭಾವನೆಗೆ ಜೋಳಿಗೆ ಅಭಿಯಾನ ಆರಂಭಿಸಿದ್ದರೆ. ಕಾರ್ಯಕರ್ತರು ಪ್ರತಿ ಹಿಂದು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಅರ್ಚಕರಿಗೆ ಸಂಭಾವನೆ ನೀಡಲಾಗುದು ಎಂದು ತಿಳಿಸಿದರು.