ನವದೆಹಲಿ: ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ತಮ್ಮ ಈರ್ವರು ಸಲಹೆಗಾರರನ್ನು ಪಂಜಾಬ್ ಪ್ರದೇಶ್ ಕಾಂಗ್ರೆಸ್ ಕಮಿಟಿ(ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಕ್ಷಣವೇ ತೆಗೆದು ಹಾಕಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಹೇಳಿದ್ದಾರೆ.
ಇತ್ತೀಚೆಗೆ ಸಿಧು ತಂಡ ಸೇರಿದ ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಮಾಲಿ ಅವರನ್ನು ಸಿಧು ಕೂಡಲೇ ವಜಾ ಮಾಡಬೇಕು. ಈ ಬಗ್ಗೆ ಸಿಧು ಕ್ರಮ ಕೈಗೊಳ್ಳದಿದ್ದರೆ ಪಕ್ಷವೇ ಅವರನ್ನು ತೆಗೆದುಹಾಕುತ್ತದೆ ಎಂದು ಎನ್ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಗ್ಯಾಂಗ್ ರೇಪ್: ಘಟನಾ ಸ್ಥಳದಲ್ಲಿ ಸಿಕ್ಕಿದೆ 34 ಸಾಕ್ಷಿ
ಮಲ್ವಿಂದರ್ ಮಾಲಿ ಅವರು ಇತ್ತೀಚಿನ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಕಾಶ್ಮೀರವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
“ಅವರ ಹೇಳಿಕೆಗಳ ಬಗ್ಗೆ ಇಡೀ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ವಿರೋಧವಿದೆ. ಜಮ್ಮು-ಕಾಶ್ಮೀರದ ಬಗ್ಗೆ ಪಕ್ಷಕ್ಕೆ ಒಂದು ನಿಲುವಿದೆ – ಅದು ಭಾರತದ ಭಾಗ ಎಂಬ ನಿಲುವು” ಎಂದಿರುವ ರಾವತ್, ಅವರನ್ನು ಪಕ್ಷ ನೇಮಿಸಿಲ್ಲ. ನಾವು ಸಿಧುಗೆ ಅವರನ್ನು ವಜಾ ಮಾಡಲು ಹೇಳಿದ್ದೀವಿ. ಪಕ್ಷಕ್ಕೆ ಮುಜುಗರ ತರುವಂತಹ ಜನರು ನಮಗೆ ಬೇಡ” ಎಂದಿದ್ದಾರೆ. (ಏಜೆನ್ಸೀಸ್)
ಮಹಾ ಸಿಎಂ ಉದ್ಧವ್ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ ವಿರುದ್ಧ ಬಿಜೆಪಿ ನಾಯಕರ ದೂರು