ನಾಶಿಕ್: ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ‘ಸಾಮ್ನಾ’ ಸಂಪಾದಕಿಯಾದ ಅವರ ಪತ್ನಿ ರಶ್ಮಿ ಠಾಕ್ರೆ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ನಾಯಕರು ದೂರು ಸಲ್ಲಿಸಿದ್ದಾರೆ. ಠಾಕ್ರೆ ವಿರುದ್ಧದ ವಿವಾದಾತ್ಮಕ ಹೇಳಿಕೆಯ ಸಂಬಂಧವಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವುದಕ್ಕೆ ಸಿಎಂ ಠಾಕ್ರೆ ವಿರುದ್ಧ ಬಿಜೆಪಿಯ ಸುನಿಲ್ ರಘುನಾಥ್ ಕೇದಾರ್ ಅವರು ದೂರು ಸಲ್ಲಿಸಿದ್ದಾರೆ. 2018 ರಲ್ಲಿ ಸಿಎಂ ಆಗುವುದಕ್ಕೂ ಮುಂಚೆ ಠಾಕ್ರೆ ಅವರು ಆಡಿದ್ದ ಅವಮಾನಕಾರಿ ಮಾತುಗಳ ವಿಡಿಯೋವೊಂದು ಮತ್ತೆ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ಕೋರಲಾಗಿದೆ.
ಇದನ್ನೂ ಓದಿ: ತಾಲಿಬಾನ್ ಡೆಪ್ಯುಟಿ ಅಬ್ದುಲ್ ಘನಿ ಬರಾದರ್ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!
ಶಿವಾಜಿ ನಿವೃತ್ತಿ ಬರ್ಕೆ ಎಂಬುವರು ಸೇನಾ ಮುಖವಾಣಿ ‘ಸಾಮನಾ’ ಪತ್ರಿಕೆಯ ಸಂಪಾದಕಿಯಾಗಿರುವ ರಶ್ಮಿ ಠಾಕ್ರೆ ವಿರುದ್ಧ ನಾಶಿಕ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪತ್ರಿಕೆಯ ಸಂಪಾದಕೀಯದಲ್ಲಿ, ಬುಧವಾರ, ಕೇಂದ್ರ ಸಚಿವ ರಾಣೆ ಬಗ್ಗೆ ನಿಂದನೀಯ ಶಬ್ದಗಳನ್ನು ಬಳಸಲಾಗಿದೆ. ಇದು ಅವರು ಹೊಂದಿರುವ ಸಂವೈಧಾನಿಕ ಸ್ಥಾನಕ್ಕೆ ಅಪಮಾನವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಿಎಂ ಠಾಕ್ರೆ ಮತ್ತು ಯುವ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಬಿಜೆಪಿ ನಾಯಕ ರಿಷಿಕೇಶ್ ಜಯಂತ್ ಅಹೆರ್ ಸಲ್ಲಿಸಿರುವ ದೂರಿನಲ್ಲಿ ಸಚಿವ ರಾಣೆ ಅವರ ಮುಂಬೈ ನಿವಾಸದ ಎದುರು ಸರ್ದೇಸಾಯಿ ಬುಧವಾರ ಕಾನೂನುಬಾಹಿರವಾದ ಪ್ರದರ್ಶನ ನಡೆಸಿದ್ದರು. ತದನಂತರ ಠಾಕ್ರೆ ಅವರನ್ನು ಸನ್ಮಾನ ಮಾಡಿ ತಪ್ಪು ಸಂದೇಶ ನೀಡಿದ್ದರು ಎಂದು ಹೇಳಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ. (ಏಜೆನ್ಸೀಸ್)