ಬೆಂಗಳೂರು: ರಸ್ತೆಗಳ ಮೇಲೆ ತೋಡುವ ಗುಂಡಿಗಳಿಗೆ ಅದೆಷ್ಟು ಜನ ಬಲಿಯಾಗಿದ್ದಾರೋ ಲೆಕ್ಕವೇ ಇಲ್ಲ. ಇದೀಗ ಬೆಂಗಳೂರಿನ ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಹಾವೇರಿ ಮೂಲದ 27 ವರ್ಷದ ಅಶ್ವಿನ್ ಎಂಬುವವರು ಗುಂಡಿಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ರಸ್ತೆ ಬಳಿ ನಡೆದಿದೆ.
ಗುಂಡಿಗೆ ಬೈಕ್ ಬಿದ್ದಿದ್ದರ ಪರಿಣಾಮ ಅಶ್ವಿನ್ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ನೋಡುತ್ತಿದ್ದಂತೆಯೇ ಸ್ಥಳೀಯರು ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಒಂದು ಗಂಟೆಯಾದರೂ ಆಂಬುಲೆನ್ಸ್ ಬರಲೇ ಇಲ್ಲ. ಕೊನೆಗೆ ಸ್ಥಳೀಯರೇ ಕಾರಿನಲ್ಲಿ ಆಶ್ವಿನ್ ಅವರನ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ತೀವ್ರವಾಗಿ ಗಾಯಗೊಂಡಿದ್ದರಿಂದ ಅಶ್ವಿನ್ ಮೃತಪಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಶ್ವಿನ್ ಅಪ್ಪ- ಅಮ್ಮನಿಗೆ ಒಬ್ಬನೇ ಪುತ್ರ ಎಂದು ತಿಳಿದುಬಂದಿದೆ. ಬಿಬಿಎಂಪಿ ಮತ್ತು ಜಲಮಂಡಳಿಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಜನವರಿ 31ರಂದು ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದವರ ವಿರುದ್ಧ ಎಫ್ಐಆರ್ ಹಾಕುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿಯ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗ ಮುಖ್ಯ ಇಂಜಿನಿಯರ್ ಪತ್ರ ಬರೆದಿದ್ದರು. ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ರಸ್ತೆ ಅಗೆದರೆ ಎಫ್ಐಆರ್ ದಾಖಲಾಗುತ್ತದೆ. ಬೆಸ್ಕಾಂ, ಜಲಮಂಡಳಿ ಅಥವಾ ಸಾರ್ವಜನಿಕರು ಯಾರೇ ರಸ್ತೆ ಅಗೆದರೂ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು ಮತ್ತು ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕೆಂದು ಅದರಲ್ಲಿ ಸೂಚಿಸಲಾಗಿತ್ತು. ಅದಾದ ಬಳಿಕವೂ ಇಂಥದ್ದೊಂದು ಘಟನೆ ಸಂಭವಿಸಿದೆ.
ಸೂರ್ಯನೊಬ್ಬನಿದ್ದರೆ ಆಹಾರವೇ ಬೇಡ ಎನ್ನುತ್ತ 27 ವರ್ಷ ಉಪವಾಸವಿದ್ದು ಬದುಕಿದ್ದ ಅಚ್ಚರಿಯ ಸಾಧಕನ ನಿಧನ
VIDEO: ಎದುರಿಗೆ ಸಾವೇ ನಿಂತಿದ್ದರೂ ಹೆದರದ ವೃದ್ಧ ದಂಪತಿ: ಯೂಕ್ರೇನ್ನ ಪತಿ-ಪತ್ನಿಗೆ ನೆಟ್ಟಿಗರ ಸಲಾಂ