ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ 8-9 ತಿಂಗಳುಗಳಿಂದ ಎಲ್ಲಾ ಕಾರ್ಯಕ್ರಮಗಳೂ ಸ್ಥಗಿತಗೊಂಡಿವೆ. ಇದರಿಂದಾಗಿ ನೃತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನೂ ಯೂಟ್ಯೂಬ್ ಇಲ್ಲವೇ ಫೇಸ್ಬುಕ್ ಲೈವ್ ಪುಟದಲ್ಲಿ ಕಲಾಪ್ರೇಮಿಗಳು ಸವಿಯಬೇಕಿತ್ತು.
ಅಂಥವರಿಗೆಲ್ಲಾ ಈಗ ಸಿಹಿಸುದ್ದಿ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಟೀಂ ಉತ್ಸಾಹಿ ತಂಡದಿಂದ ಪಾಂಚಜನ್ಯ ಮತ್ತು ದಕ್ಷಾದ್ವರ ಯಕ್ಷಗಾನವು ನಡೆಯಲಿದೆ. ತೆಂಕು ಮತ್ತು ಬಡಗಿನ ಯಕ್ಷದಿಗ್ಗಜರ ಸಮ್ಮಿಲನ ಇದಾಗಿದೆ.
ಇದೇ ಭಾನುವಾರ ಅಂದರೆ ಡಿ.20ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9ರವರೆಗೆ ಈ ಯಕ್ಷಗಾನಗಳು ಜರುಗಲಿವೆ.
ನಟಿ, ಯಕ್ಷಗಾನ ಕಲಾವಿದೆ ನಾಗಶ್ರೀ ಜಿ.ಎಸ್ ಹಾಗೂ ಪಲ್ಲವ ಗಾಣಿಕ ಹೇರಂಜಾಲು ಇವರ ಸಂಚಾಲಕತ್ವದಲ್ಲಿ ಟೀಂ ಉತ್ಸಾಹಿ ತಂಡದಿಂದ ಈ ಕಾರ್ಯಕ್ರಮ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಇದಾಗಲೇ 9 ಪ್ರದರ್ಶನಗಳನ್ನು ಫೇಸ್ಬುಕ್ ಲೈವ್ ಹಾಗೂ ಯೂಟ್ಯೂಬ್ಗಳಲ್ಲಿ ನೀಡಲಾಗಿದ್ದು, ಇದೀಗ ನೇರವಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿರುವುದು ಹೊಸದೊಂದು ಅನುಭವವನ್ನೇ ನೀಡುತ್ತಿದೆ ಎಂದಿದೆ ಟೀಂ ಉತ್ಸಾಹಿ ತಂಡ.
ಕಾರ್ಯಕ್ರಮವನ್ನು ನೇರವಾಗಿಯೇ ಸವಿಯಬಯಸಿರುವ ಅನೇಕ ಯಕ್ಷಗಾನ ಪ್ರಿಯರಿಗೆ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ, ಕರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತದೆ. ಇಡೀ ಹಾಲ್ ಅನ್ನು ಸ್ಯಾನಿಟೈಸರ್ ಮಾಡಿದ ಬಳಿಕವೇ ಕಾರ್ಯಕ್ರಮ ನಡೆಯಲಿದೆ ಎಂದು ತಂಡದವರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಹಳ್ಳಿಮನೆಯ ನೀಲಾವರ ಸಂಜೀವ ರಾವ್, ಬಿಬಿಎಂಪಿ ಹೆಚ್ಚುವರಿ ಆಯುಕ್ತ ನಾಗರಾಜ್ ಶೇರೆಗಾರ್, ಬಿಬಿಎಂಪಿ ಸದಸ್ಯ ಜೆ.ಉಮೇಶ್ ಶೆಟ್ಟಿ, ಕನ್ನಡ ಭವನದ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಉದ್ಯಮಿ ಕೃಷ್ಣಮೂರ್ತಿ ಮಂಜರು, ಚಲನಚಿತ್ರ ಹಾಸ್ಯನಟ ಟೆನ್ನಿಸ್ ಕೃಷ್ಣ ಹಾಗೂ ಯುವ ಚಲನಚಿತ್ರ ನಿರ್ದೇಶಕ ಗುರುದತ್ ಗಾಣಿಗ ಸೇರಿದಂತೆ ವಿವಿಧ ಕ್ಷೇತ್ರದ ಮುಖಂಡರಾದ ಜಿ.ಕೆ.ಸೋಮಯಾಜಿ, ಸುಧಾಕರ ಪೈ, ನಾಗರಾಜ್ ನಾಯಕ್, ರಾಘವೇಂದ್ರ ಹತ್ವಾರ್, ಸುರೇಶ್ ಹೆಗಡೆ ಕಡತೋಕ, ಪ್ರವೀಣ್ ಗಡಿಯಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಗುತ್ತದೆ.
ಬಡಗು ಮೇಳದಲ್ಲಿ: ಭಾಗವತರು: ಗಣೇಶ್ ಕುಮಾರ್ ಹೆಬ್ರಿ, ಹೇರಂಜಾಲು ಪಲ್ಲವ ಗಾಣಿಗ. ಮದ್ದಳೆ: ಶಶಾಂಕ್ ಆಚಾರ್ಯ, ಚಂಡೆ: ರಾಕೇಶ್ ಮಲ್ಯ ಹಳ್ಳಾಡಿ. ಗೋಪಾಲ ಆಚಾರ್ಯ, ನಾಗೇಂದ್ರ ರಾವ್, ಪ್ರಶಾಂತ್ ವರ್ಧನ, ಮಂಜು ಹವ್ಯಕ, ದ್ವತೇಶ್ ಕಾಮತ್, ನಾಗಶ್ರೀ ಜಿ.ಎಸ್.ನಿಹಾರಿಕ ಭಟ್, ಮಾನಸ ಉಪಾಧ್ಯ ಮುಂತಾದವರು.
ತೆಂಕು ಮೇಳದಲ್ಲಿ: ಭಾಗವತರು: ರವಿಚಂದ್ರ ಕನ್ನಡಿಕಟ್ಟೆ; ಮದ್ದಳೆ: ಕೃಷ್ಣಪ್ರಕಾಶ್ ಉಳಿತ್ತಾಯ, ಚಂಡೆ: ಚೈತನ್ಯಕೃಷ್ಣ ಪದ್ಯಾಣ; ಚಕದ್ರತಾಳ: ಶಿಬಿನ್ ಶರ್ಮ, ಜಯಪ್ರಕಾಶ್ ಶೆಟ್ಟಿ, ಸೀತಾರಾಮ ಕುಮಾರ್ ಶಿವಕುಮಾರ್ ಬೇಗಾರ್, ಗೋಪಾಲಕೃಷ್ಣ ಭಟ್, ದಿಶಾ ಶೆಟ್ಟಿ ಮುಂತಾದವರು.
ಪಾಕ್ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…
VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ