ಲಖನೌ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಿನ್ನೆ (ಭಾನುವಾರ) ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಾ ನಿರತ ರೈತರ ನಡುವೆ ನಡೆದ ಮಾರಾಮಾರಿಯಲ್ಲಿ ಎಂಟು ಮಂದಿ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆಯೇ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಅಸುನೀಗಿದ್ದಾಗಿ ರೈತರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಮಿಶ್ರಾ ಹೇಳಿದ್ದರು.
ಆದರೆ ಇದೀಗ ಆಶೀಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರ ವಿರುದ್ಧ ಕೊಲೆ ಕೇಸ್ ದಾಖಲು ಮಾಡಲಾಗಿದೆ. ಈ ಘಟನೆಯಲ್ಲಿ ಹರಿದು ಇಬ್ಬರು ರೈತರು ಮೃತಪಟ್ಟ ಬೆನ್ನಲ್ಲೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಒಬ್ಬ ಪತ್ರಕರ್ತ, ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ.
ತಮ್ಮ ಪುತ್ರ ಸ್ಥಳದಲ್ಲಿ ಇರಲೇ ಇಲ್ಲ. ಈ ಕುರಿತು ಸಾಕ್ಷ್ಯ ಕೂಡ ತಮ್ಮ ಬಳಿ ಇದೆ ಎಂದು ಸಚಿವ ಮಿಶ್ರಾ ಹೇಳಿದ್ದರು. ಆದರೆ, ರೈತ ಒಕ್ಕೂಟದ ಮುಖಂಡ ಡಾ. ದರ್ಶನ್ ಪಾಲ್ ಮಾಹಿತಿ ನೀಡಿದ್ದು, ಆಶೀಶ್ ಮಿಶ್ರಾ ಇದ್ದಿದ್ದನ್ನು ನಾವು ನೋಡಿದ್ದೇವೆ ಎಂದಿದ್ದರು. ಘಟನೆ ಕುರಿತು ಮಾಹಿತಿ ನೀಡಿರುವ ಪಾಲ್, ಪ್ರತಿಭಟನೆ ನಡೆಸುವ ಸ್ಥಳಕ್ಕೆ ಸಚಿವರು ಬಂದಿದ್ದರು. ಆಗ ನಾವು ಅದನ್ನು ವಿರೋಧಿಸಲು ಮುಂದಾದೆವು. ನಮ್ಮ ಉದ್ದೇಶ ಹೆಲಿಪ್ಯಾಡ್ಗೆ ಘೇರಾವ್ ಹಾಕುವುದಷ್ಟೇ ಆಗಿತ್ತು. ಈ ಪ್ರತಿಭಟನೆ ಮುಗಿಸಿ ರೈತರೆಲ್ಲ ವಾಪಸ್ ಹೋಗುವ ವೇಳೆ ಒಟ್ಟು ಮೂರು ಕಾರುಗಳು ರೈತರ ಕಡೆಗೆ ಬಂದವು. ಒಬ್ಬ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸಲಿಲ್ಲ ಎಂದು ಹೇಳಿದ್ದಾರೆ.
ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಎಂಟು ಸಾವು- ಭೇಟಿಗೆ ಬಂದ ಪ್ರಿಯಾಂಕಾ ಬಂಧನ