ಬೆಂಗಳೂರು: ಬಾರದ ಲೋಕಕ್ಕೆ ಹೋಗಿರುವ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೀವನದ ಬಹುದೊಡ್ಡ ಕನಸೊಂದು ಅವರ ಜತೆಯೇ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಅವರ ಆಸೆಯೊಂದು ಕೊನೆಗೂ ಈಡೇರಲೇ ಇಲ್ಲ.
ಅದೇನೆಂದರೆ ಅವರಿಗೆ ಚಿತ್ರವೊಂದರ ನಿರ್ದೇಶನ ಮಾಡುವ ಆಸೆ ಇತ್ತು. ‘ಸಲಗ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ವೇದಿಕೆ ಮೇಲೆ ಪುನೀತ್ ಅವರು ತಮ್ಮ ಈ ಆಸೆಯನ್ನು ಹೇಳಿಕೊಂಡಿದ್ದರು. ಶಿವರಾಜ್ಕುಮಾರ್ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ಈ ಬಗ್ಗೆ ಅವರು ವೇದಿಕೆ ಮೇಲೆ ಈ ವಿಷಯ ಹೇಳಿದಾಗ ಶಿವರಾಜ್ಕುಮಾರ್ ಅವರು ಕೂಡ ಬಹಳ ಖುಷಿ ಪಟ್ಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು.
‘ಒಂದು ಒಳ್ಳೆಯ ಕಾನ್ಸೆಪ್ಟ್ ತೆಗೆದುಕೊಂಡು ಬರುತ್ತೇನೆ. ಅಭಿಮಾನಿಗಳು ಸೀಟ್ ತುದಿಯಲ್ಲಿ ಕುಳಿತು ನೋಡಬೇಕು. ಅಂಥ ಸಿನಿಮಾ ಅದಾಗಬೇಕು. ಥ್ರಿಲ್ಲರ್ ಕೊಡಬೇಕು. ಸಂತೋಷ್ ಆನಂದ್ರಾಮ್ ನನಗೆ ಡೈಲಾಗ್ ಬರೆದುಕೊಡುತ್ತಾರೆ. ಚೇತನ್ ಕುಮಾರ್ ನನಗೆ ಸಪೋರ್ಟ್ ಮಾಡೋಕೆ ಇರ್ತಾರೆ. ನಾನು ಸ್ಟೈಲ್ ಆಗಿ ಬಂದು ಆ್ಯಕ್ಷನ್-ಕಟ್ ಹೇಳಬೇಕು ಎಂದು ಪುನೀತ್ ಹೇಳಿದ್ದರು.
‘ನೀವು ನಿರ್ದೇಶನ ಮಾಡಿದರೆ ನಾನು ಸಹಾಯಕ ನಿರ್ದೇಶಕ ಆಗುತ್ತೇನೆ’ ಎಂದು ಕೂಡಲೇ ವೇದಿಕೆ ಮೇಲಿದ್ದು ಉಪೇಂದ್ರ ಹೇಳಿದ್ದರು. ಇದರ ಜತೆಗೆ ಕ್ಲಾಸಿಕ್ ಕಥೆಗಳ ಸಿನಿಮಾ ಮಾಡಬೇಕು, ಹೊಸ ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡಬೇಕು, ಕನ್ನಡದಲ್ಲೂ ಇಂಗ್ಲಿಷ್ ಮಾದರಿಯ ಸಿನಿಮಾಗಳನ್ನು ಮಾಡಬೇಕು ಎಂದು ಅವರು ಹೇಳಿದ್ದರು.