ಮುಂಬೈ: ಕಳೆದ ಫೆಬ್ರವರಿ ತಿಂಗಳಿನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯ ಮುಂದೆ ಅನುಮಾನಾಸ್ಪದವಾಗಿ ನಿಂತಿದ್ದ ಕಾರು, ಆ ಕಾರಿನಲ್ಲಿದ್ದ ಸ್ಫೋಟಕ ಹಾಗೂ ನಂತರ ಕಾರಿನ ಮಾಲೀಕನ ಬರ್ಬರ ಕೊಲೆ ಪ್ರಕರಣದ ರಹಸ್ಯವೊಂದನ್ನು ರಾಷ್ಟ್ರೀಯ ತನಿಖಾ ದಳ ಕೋರ್ಟ್ಗೆ ಹೇಳಿದೆ.
ಅಂಬಾನಿ ನಿವಾಸವಾದ ಆ್ಯಂಟಿಲಿಯಾ ಬಳಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಮುಕೇಶ್ ಅಂಬಾನಿ ಮನೆ ಮುಂದೆ ನಿಲ್ಲಿಸಲಾಗಿತ್ತು. ಈ ಮೂಲಕ ದೊಡ್ಡ ಅನಾಹುತ ಸೃಷ್ಟಿಸಲು ಸಂಚು ರೂಪಿಸಲಾಗಿತ್ತು. ಆದರೆ ಪೊಲೀಸರು ಕಾರನ್ನು ಪತ್ತೆ ಹಚ್ಚಿ ದೊಡ್ಡ ಅನಾಹುತ ತಪ್ಪಿಸಿದ್ದರು.
ನಂತರ ಆ ಕಾರು ಉದ್ಯಮಿ ಮನ್ಸುಖ್ ಹಿರೇನ್ ಅವರದ್ದು ಎಂದು ತಿಳಿದಿತ್ತು. ಇದಾದ ಕೆಲವೇ ದಿನಗಳಲ್ಲಿ ಮನ್ಸುಖ್ ಅವರ ಮೃತದೇಹ ಪತ್ತೆಯಾಗಿತ್ತು. ಕಾರಿನಲ್ಲಿ ಸ್ಫೋಟಕ ಇಟ್ಟು ಸಂಚು ರೂಪಿಸಿದವರಲ್ಲಿ ಮನ್ಸುಖ್ ಕೂಡ ಒಬ್ಬರು. ಅವರ ಕೊಲೆಯ ಕುರಿತು ಬೆನ್ನಟ್ಟಿ ಹೋದ ರಾಷ್ಟ್ರೀಯ ತನಿಖಾ ದಳ ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಕೆಲವೊಂದು ಮಾಹಿತಿ ನೀಡಿದೆ.
ಅದರಲ್ಲಿ ಮುಖ್ಯವಾದದ್ದು ಏನೆಂದರೆ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮನ್ಸುಖ್ ಹಿರೇನ್ ಹತ್ಯೆಗಾಗಿ ಆರೋಪಿಗೆ 45 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿಯನ್ನು ತನಿಖಾ ದಳ ಹೇಳಿದೆ. ಮಾರ್ಚ್ 5ರಂದು ಮನ್ಸುಖ್ ಹಿರೇನ್ ಅವರ ಮೃತದೇಹ ಥಾಣೆಯ ರೆಟಿ ಬಂದರ್ನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 150 ಜನರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತನಿಖಾ ದಳ ಕೋರ್ಟ್ಗೆ ಮಾಹಿತಿ ನೀಡಿದೆ.
ಈ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿಗಳಾದ ಪ್ರದೀಪ್ ಶರ್ಮಾ ಮತ್ತು ಸಚಿನ್ ವಾಜೆ ಅವರನ್ನು ಕೂಡ ಬಂಧಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಇದಾಗಲೇ ಐದನೇ ಆರೋಪಿ ಎನಿಸಿರುವ ಸುನಿಲ್ ಮಾನೆ ಅವರ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಪ್ರಕರಣದಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳಾಗಿರುವ ಹಿನ್ನೆಲೆಯಲ್ಲಿ ಅವರು ಸಾಕ್ಷ್ಯಾಧಾರವನ್ನು ಹೇಗೆ ನಾಶಪಡಿಸಬೇಕು ಎಂಬುದನ್ನು ಬಲ್ಲವರಾಗಿದ್ದಾರೆ. ಇನ್ನು ಹಲವು ಆರೋಪಿಗಳು ಭಾರಿ ಕ್ರಿಮಿನಲ್ ಹಿನ್ನೆಲೆಯವರು. ಆದ್ದರಿಂದ ಇದರ ಸಂಪೂರ್ಣ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕಿದೆ ಎಂದು ತನಿಖಾ ಸಂಸ್ಥೆ ಕೋರ್ಟ್ಗೆ ಹೇಳಿದೆ. ಜತೆಗೆ ಅಂಬಾನಿ ಮನೆಯ ಮುಂದೆ ಈ ಕಾರನ್ನು ಏಕೆ ನಿಲ್ಲಿಸಲಾಗಿತ್ತು ಎಂಬ ಅಂಶವೂ ಬಹಿರಂಗಗೊಳ್ಳಬೇಕಿದೆ.
ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ: ಎನ್ಕೌಂಟರ್ ಸ್ಪೆಷಲಿಸ್ಟ್ ವಾಜೆ ಸಸ್ಪೆಂಡ್-ಯಾರೀ ಇನ್ಸ್ಪೆಕ್ಟರ್?