ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಕಾರ್ ಒಂದರಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಕೌಂಟರ್ ಸ್ಪೆಷಲಿಸ್ಟ್, ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಅವರನ್ನು ಅವರ ಸ್ಥಾನದಿಂದ ಅಮಾನತು ಮಾಡಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಿನ್ನೆಯಷ್ಟೇ ಇವರನ್ನು ಬಂಧಿಸಿತ್ತು. ಇಂದು ಅವರನ್ನು ಮುಂಬೈ ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. ಸಚಿನ್ ವಾಜೆ ಅವರನ್ನು ಎನ್ಐಎ ವಶಕ್ಕೆ ಪಡೆದು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಸಚಿನ್ ವಾಜೆ ಅವರನ್ನು ವಿಚಾರಣೆಗಾಗಿ ಮಾರ್ಚ್ 25ರ ವರೆಗೆ ಎನ್ಐಎ ವಶಕ್ಕೆ ಪಡೆದುಕೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ ಮುಂಬೈ ಪೊಲೀಸ್ ಇಲಾಖೆ ಸಚಿನ್ ವಾಜೆ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
ಫೆ.28 ರಂದು ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದೆದುರು ಸ್ಕಾರ್ಪಿಯೋ ಒಂದರಲ್ಲಿ ಸ್ಪೋಟಕ ಮತ್ತು ಬೆದರಿಕೆ ಪತ್ರಗಳು ಪತ್ತೆಯಾಗಿದ್ದವು. ನಂತರ ಈ ಕಾರು ತಮ್ಮದೆಂದು ಹೇಳಿಕೊಂಡಿದ್ದ ಮನ್ಸುಖ್ ಹಿರೇನ್ ಎಂಬುವವರು ದೂರು ದಾಖಲಿಸಿದ ದಿನವೇ ನಿಗೂಢವಾಗಿ ಮೃತಪಟ್ಟಿದ್ದರು.
ನಂತರ ಮನಸುಖ್ ಹಿರೇನ್ ಅವರೊಂದಿಗೆ ಕೊನೆಯದಾಗಿ ಸಚಿನ್ ವಾಜೆ ಕಂಡುಬಂದಿದ್ದರು ಎಂದು ಹಿರೇನ್ ಪತ್ನಿ ವಾಜೆ ಮೇಲೆ ಆರೋಪ ಮಾಡಿದ್ದರು. ಇದರಿಂದ ವಾಜೆ ಅವರನ್ನು ಶನಿವಾರ ಸತತ 12 ಗಂಟೆ ವಿಚಾರಣೆ ನಡೆಸಿ ಬಂಧಿಸಿದ್ದು, ಇದೀಗ ಅಮಾನತು ಮಾಡಲಾಗಿದೆ.
ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ವಾಜೆ ಮಧ್ಯಂತರ ಜಾಮೀನು ನೀಡುವಂತೆ ಹಾಗೂ ಮಾರ್ಚ್ 19 ರಂದು ನಡೆಯುವ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ವಜಾ ಮಾಡಿದೆ. ವಿರೋಧ ಪಕ್ಷವಾದ ಬಿಜೆಪಿ ವಾಜೆ ಬಂಧನಕ್ಕೆ ಒತ್ತಾಯಿಸಿತ್ತು.
ಸಚಿನ್ ವಾಜೆ 1990ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಸೇರ್ಪಡೆಗೊಂಡಿದ್ದರು. ನಂತರ 2002ರಲ್ಲಿ ಘಾಟ್ಕೋಪರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖವಾಜಾ ಯೂನುಸ್ ಲಾಕಪ್ ಡೆತ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. 2007ರಲ್ಲಿ ಪೊಲೀಸ್ ಇಲಾಖೆಗೆ ರಾಜಿನಾಮೆ ನೀಡಿ ಶಿವಸೇನೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ 2020ರ ಜೂನ್ 4 ರಂದು ಮತ್ತೆ ಮುಂಬೈ ಪೊಲೀಸ್ ಇಲಾಖೆಗೆ ಸಚಿನ್ ವಾಜೆ ಮರು ನೇಮಕಗೊಂಡಿದ್ದರು.
ಜೈಷ್ ಕಮಾಂಡರ್ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ- ಯುವಕರನ್ನು ಉಗ್ರರನ್ನಾಗಿಸುತ್ತಿದ್ದ ಪಾತಕಿ ಈತ
ಗಂಡನ ಆಸ್ತಿಯಲ್ಲಿ ಆತ ಬದುಕಿರುವಾಗಲೇ ಭಾಗ ಕೇಳುವ ಹಕ್ಕು ಪತ್ನಿಗೆ ಇದೆಯೆ?
ಆರೋಗ್ಯ ಕೇಂದ್ರದಲ್ಲಿ ಉದ್ಯೋಗ: ಎಸ್ಎಸ್ಎಲ್ಸಿಯಿಂದ ಎಂಬಿಬಿಎಸ್ವರೆಗೆ ಅವಕಾಶ, ₹1 ಲಕ್ಷದವರೆಗೂ ಸಂಬಳ
ಹೆಸರೆತ್ತಿದರೆ ಖಾತೆ ಕಟ್, ಪತ್ರಿಕೆಯಲ್ಲಿ ಸಂಭಾವ್ಯರ ಹೆಸರು ಬಂದರೆ ಅಂತಹವರ ಆಕಾಂಕ್ಷೆಗೆ ಕೊಕ್ಕೆ !