More

    ಮಳವಳ್ಳಿಯನ್ನು ಬೆಚ್ಚಿಬೀಳಿಸಿರೋ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕರ ಪುತ್ರ, ಇನ್ಸ್​ಪೆಕ್ಟರ್​ ಭಾಗಿ?

    ಮಳವಳ್ಳಿ (ಮಂಡ್ಯ): ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಸಮೀಪ ಫೆ. 9ರಂದು ರಸ್ತೆ ಬದಿಯಲ್ಲಿ ಬಿಸಾಡಿದ್ದ ಕೊಳ್ಳೇಗಾಲ ಮೂಲದ ಸಲೀಂ(40) ಕೊಲೆ ಪ್ರಕರಣ ತಿರುವು ಪಡೆದಿದ್ದು, ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೈವಾಡದ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಲ್​ ಇನ್ಸ್​ಪೆಕ್ಟರ್​ರೊಬ್ಬರು ಹುನ್ನಾರ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ರೈಸ್​ ಪುಲ್ಲಿಂಗ್​ ವಿಷಯವಾಗಿ ಈಗಾಗಲೇ ರಾಜ್ಯದಲ್ಲಿ ಹಲವು ಅಪರಾಧ ಪ್ರಕರಣಗಳು ವಿವಿಧ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿವೆ. ಇದೇ ವಿಚಾರವಾಗಿಯೇ ಸಲೀಂ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ಕೆ.ಆರ್​.ಪೇಟೆಯ ಮಾಜಿ ಶಾಸಕರ ಪುತ್ರನನ್ನು (ವೈದ್ಯ) ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

    ಘಟನೆಯ ವಿವರ:
    ಸಲೀಂ ತನ್ನ ಬಳಿ ತಾಮ್ರದ ಬೊಂಬು (ರೈಸ್​ ಪುಲ್ಲಿಂಗ್​) ಇರುವುದಾಗಿ ಹೇಳಿ ಮಾಜಿ ಶಾಸಕರ ಪುತ್ರನೊಡನೆ 500 ಕೋಟಿ ರೂ.ಗೆ ವ್ಯವಹಾರ ಕುದುರಿಸಿ 5 ಲಕ್ಷ ರೂ. ಮುಂಗಡ ಪಡೆದಿದ್ದನು. ಫೆ. 7ರಂದು ಮಾಜಿ ಶಾಸಕರ ಪುತ್ರ ಸಲೀಂನನ್ನು ಮೈಸೂರಿನ ಇಲವಾಲ ಸಮೀಪಕ್ಕೆ ಕರೆಸಿದ್ದನೆನ್ನಲಾಗಿದೆ. ಆ ವೇಳೆ ರೈಸ್​ ಪುಲ್ಲಿಂಗ್​ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುವ ವೇಳೆ ಸಲೀಂ ಮೃತಪಟ್ಟಿದ್ದಾನೆ.

    ಇದರಿಂದ ಗಾಬರಿಗೊಂಡ ಮಾಜಿ ಶಾಸಕರ ಪುತ್ರ ಮತ್ತು ಆತನ ಹಿಂಬಾಲಕರು ಕಾರಿನಲ್ಲಿ ಸಲೀಂ ಶವವಿಟ್ಟುಕೊಂಡು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಸುತ್ತಾಡಿದ್ದಾರೆ. ಆದರೆ ಎಲ್ಲಿಯೂ ಅವರಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಹಿಂದೆ ಕೆ.ಆರ್​.ಪೇಟೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಪರಿಚಯವಿದ್ದ ಮತ್ತು ಪ್ರಸ್ತುತ ಮಳವಳ್ಳಿ ಉಪ ವಿಭಾಗದ ಸರ್ಕಲ್​ ಇನ್ಸ್​ಪೆಕ್ಟರ್​ರನ್ನು ಮಾಜಿ ಶಾಸಕರ ಪುತ್ರ ಸಂಪಕಿರ್ಸಿ, ಪ್ರಕರಣ ಮುಚ್ಚಿಹಾಕಲು ಸಹಕಾರ ಕೇಳಿದ್ದಾನೆ.

    ಇದಕ್ಕಾಗಿ ಸಿಪಿಐಗೆ 10 ಲಕ್ಷ ರೂ. ನಗದು ಮತ್ತು ಒಂದು ಹೊಸ ಕಾರು ಕೊಡಿಸುವ ಡೀಲ್​ ಕುದಿರಿಸಿದ್ದಾನೆ ಎನ್ನಲಾಗಿದೆ. ಸಿಪಿಐ ತನ್ನ ಠಾಣಾ ವ್ಯಾಪ್ತಿಗೆ ಬರುವ ಸ್ಥಳವೊಂದರಲ್ಲಿ ಮೃತದೇಹವನ್ನು ಹಾಕಿಸಿ, ಮೂವರು ಆರೋಪಿಗಳು ಶರಣಾಗಲು ಪ್ಲಾನ್​ ರೂಪಿಸಿದ್ದಾರೆ. ಅದರಂತೆ, ಫೆ.8ರ ರಾತ್ರಿ ಪಂಡಿತಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಲೀಂ ಮೃತದೇಹವನ್ನು ಟಾರ್ಪಾಲ್​ವೊಂದರಲ್ಲಿ ಸುತ್ತಿ ಬಿಸಾಡಿ ಹೋಗಿದ್ದಾರೆ. ಫೆ.9 ರಂದು ಕೆ.ಆರ್​.ಪೇಟೆ ಮೂಲದ ಮಂಜುನಾಥ, ವಜ್ರಮುನಿ, ಆನಂದ ಎಂಬುವರು ಪೊಲೀಸ್​ ಠಾಣೆಗೆ ತೆರಳಿ ಕೊಲೆ ಆರೋಪಿಗಳು ನಾವೇ ಎಂದು ಶರಣಾಗಿದ್ದಾರೆ.

    ಇದಕ್ಕಾಗಿ ಬಂಧಿಯಾಗಿರುವ ಮೂವರಿಗೆ ತಲಾ 10 ಲಕ್ಷ ರೂ. ಹಾಗೂ ನಂತರದ ದಿನಗಳಲ್ಲಿ ನ್ಯಾಯಾಲಯದಲ್ಲಿ ಜಾಮೀನು ಕೊಡಿಸಿ ಹೊರತಂದು ದೋಷಮುಕ್ತರನ್ನಾಗಿಸುವ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಿಪಿಐ ಮಾಡಿದ್ದ ಪ್ಲಾನ್​ನಂತೆ ಶವ ಬಿಸಾಡಿದ್ದ ಸ್ಥಳ ಅವರ ಠಾಣಾ ವ್ಯಾಪ್ತಿಗೆ ಬಾರದೆ, ಮಳವಳ್ಳಿ ಗ್ರಾಮಾಂತರ ಪೊಲೀಸ್​ ಠಾಣಾ ಸರಹದ್ದಿಗೆ ಸೇರಿದೆ.

    ಈ ಹಿನ್ನೆಲೆಯಲ್ಲಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್​ ಇನ್ಸ್​ಪೆಕ್ಟರ್​ ಎ.ಕೆ.ರಾಜೇಶ್​, ತನಿಖೆ ಪ್ರಾರಂಭಿಸಿ ಮಾಜಿ ಶಾಸಕರ ಪುತ್ರನನ್ನು ಫೆ.26ರಂದು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ನಡುವೆ, ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕರ ಪುತ್ರನನ್ನು ರಸಬೇಕೆಂಬ ಒತ್ತಡ ಪ್ರಭಾವಿಗಳಿಂದ ಬಂದಿದ್ದರಿಂದ ಮತ್ತು ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಯೇ ಭಾಗಿಯಾಗಿರುವುದರಿಂದ ಇಲಾಖೆಗೆ ಆಗುವ ಮುಖಭಂಗ ತಪ್ಪಿಸಲು ಕೆಲವು ಹಿರಿಯ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

    ರೈಸ್​ ಪುಲ್ಲಿಂಗ್​ ವಿಷಯವಾಗಿ ಒಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಬಂಧನವಾಗಿದೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿರುವುದರಿಂದ ಪೂರ್ಣ ಮಾಹಿತಿಯನ್ನು ಸೋಮವಾರ ಬಹಿರಂಗಪಡಿಸಲಾಗುವುದು ಎಂದು ಮಂಡ್ಯ ಎಸ್‌ಪಿ ಎನ್​.ಯತೀಶ್​ ಹೇಳಿದ್ದಾರೆ.

    ಬೈಕ್‌ ಕೊಡ್ಸು, ಇಲ್ಲಾ ಗರ್ಭಪಾತ ಮಾಡ್ಸು: ಒಪ್ಪದ ತುಂಬು ಗರ್ಭಿಣಿಗೆ ತ್ರಿಬಲ್‌ ತಲಾಖ್‌ ಕೊಟ್ಟು ಹೊರಹಾಕಿದ!

    ತನ್ನ ದುಡಿಮೆ ಸಾಲದೆಂದು, ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ- ಶೀಲ ಶಂಕಿಸಿ ಕೊಲೆ ಮಾಡಿದ, ಇಬ್ಬರು ಕಂದಮ್ಮಗಳು ಅನಾಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts