ಮಧುರೈ: ಕಳೆದ ತಿಂಗಳು ದೇಶದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ, ಎದೆ ನಡುಗಿಸುವ ರೀತಿಯಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಸಬ್ ಇನ್ಸ್ಪೆಕ್ಟರ್ ಪಾಲ್ದುರೈ ಕರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಅವಧಿ ಮೀರಿ ಅಂಗಡಿ ತೆರೆದಿದ್ದ ಹಿನ್ನೆಲೆಯಲ್ಲಿ ತಂದೆ ಹಾಗೂ ಮಗನನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದ ಪೊಲೀಸರು ಹೀನಾಯವಾಗಿ ಮನಸೋಇಚ್ಛೆ ಥಳಿಸಿ, ಅವರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತ ಕೆಲವು ಪೊಲೀಸರ ಪೈಕಿ ಇವರೂ ಇಬ್ಬರು.
ತೂತುಕುಡಿಯ ಸತ್ತಾನ್ ಕುಳಂನಲ್ಲಿ ವ್ಯಾಪಾರಿಗಳಾದ ತಂದೆ ಮಗ, ಜಯರಾಜ್ ಮತ್ತು ಬೆನಿಕ್ಸ್ ಅವರ ಮರ್ಮಾಂಗ ಸೇರಿದಂತೆ ಹಲವು ಭಾಗಗಳಲ್ಲಿ ರಕ್ತ ಸೋರುವ ರೀತಿಯಲ್ಲಿ ಥಳಿಸಿ, ದೌರ್ಜನ್ಯ ಎಸಗಿರುವ ಆರೋಪ ಇವರ ಮೇಲೆ ಇತ್ತು.
ಲಾಕಪ್ ಡೆತ್ ಘಟನೆಗೆ ಸಂಬಂಧಿಸಿದಂತೆ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇವರನ್ನೂ ಬಂಧಿಸಲಾಗಿತ್ತು. ಅಲ್ಲಿಯೇ ಅವರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು.
ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪೌಲ್ ಅವರ ಪತ್ನಿ ಮಂಗಯಾರ್ತಿಲಂಗಂ ಅವರು ಅರ್ಜಿ ಸಲ್ಲಿಸಿ, ಪತಿಯನ್ನು ತಮ್ಮ ಊರು ಕನ್ಯಾಕುಮಾರಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಕರೆದೊಯ್ಯಲು ಅನುಮತಿ ನೀಡುವಂತೆ ಕೋರಿದ್ದರು.
ಇದನ್ನೂ ಓದಿ: ಶವ ನೋಡಬೇಕೆಂದರೆ 51,000 ರೂ.ಕೊಡಿ ಎಂದ ಆಸ್ಪತ್ರೆ ಸಿಬ್ಬಂದಿ; ಪೊಲೀಸರನ್ನೂ ವಾಪಸ್ ಕಳಿಸಿದರು
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯಲ್ಲಿ ವಾರ ಕಳೆದರೂ ಯಾವುದೇ ಸುಧಾರಣೆಗಳೂ ಕಂಡಿಲ್ಲ. ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಳ್ಳುತ್ತಿದೆ. ಹೀಗಾಗಿ ಅವರಿಗೆ ಹೆಚ್ಚಿನ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದರು.
ಅನುಮತಿಗೆ ಮನವಿ ಮಾಡಿಕೊಂಡಿದ್ದ ನಡುವಲ್ಲೇ ಇದೀಗ ಪೌಲ್ ಕರೊನಾಕ್ಕೆ ಬಲಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಚಿನ್ನದ ಜತೆ ಮಗಳ ಅಪಹರಿಸಿದರೆಂದು ಗೋಳಾಡಿದ ಅಪ್ಪ, ಸತ್ಯ ತಿಳಿದು ಬೇಸ್ತು ಬಿದ್ದ!