ಗ್ವಾಲಿಯರ್ (ಮಧ್ಯಪ್ರದೇಶ): ಈ ದೇಶ ಕಂಡ ಅದ್ವಿತೀಯ ಸಂಗೀತಕಾರರಲ್ಲಿ ಒಬ್ಬರು ತಾನ್ಸೇನ್. ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದ ಪ್ರಸಿದ್ಧ ಸಂಗೀತಗಾರರಾಗಿದ್ದ ತಾನ್ಸೇನ್ ಶಾಸ್ತ್ರೀಯ ಸಂಗೀತಕ್ಕೆ ನೀಡಿರುವ ಕೊಡುಗೆ ಅಪಾರ.
ಇಂಥ ಶ್ರೇಷ್ಠ ಕಲಾವಿದನ ನೆನಪಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್ನ ಬೇಹತ್ ಎಂಬಲ್ಲಿ ಇಲ್ಲಿಯ ಸರ್ಕಾರ ಪ್ರತಿವರ್ಷವೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಆದ್ದರಿಂದ ಈ ಸಂಗೀತ ಕಾರ್ಯಕ್ರಮಕ್ಕೆ ತನ್ನದೇ ಆದ ಘನತೆ ಇದೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ಭಾಗಗಳ ಸಂಗೀತ ದಿಗ್ಗಜರು ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಗತ್ತಿನ ಮೂಲೆಮೂಲೆಗಳಿಂದ ಸಹಸ್ರಾರು ಕಲಾರಸಿಕರು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಈ ಬಾರಿಯ ಕಾರ್ಯಕ್ರಮ ಡಿಸೆಂಬರ್ 26ರಿಂದ ಶುರುವಾಗಿದ್ದು 30ರವರೆಗೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ 350 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಆಗಿರುವ ಘಟನೆ ಮಾತ್ರ ಸಂಗೀತ ಕಲಾರಸಿಕರಿಗೆ ನೋವುಂಟು ಮಾಡುವುದು ಮಾತ್ರವಲ್ಲದೇ ಜಗತ್ತಿನಾದ್ಯಂತದ ಕಲಾಪ್ರೇಮಿಗಳು ಭಾರತದ ರಾಜಕಾರಣಿಗಳಿಗೆ ಛೀಮಾರಿ ಹಾಕುವಂತಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ನಿನ್ನೆ ಡಿ.28ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುತ್ತಲಿತ್ತು. ಕಲಾರಸಿಕರು ನೇರವಾಗಿ, ಫೇಸ್ಬುಕ್ ಲೈವ್, ಯೂಟ್ಯೂಬ್ಗಳ ಮೂಲಕ ಈ ಸಂಗೀತದ ಸವಿಯನ್ನು ಸವಿಯುತ್ತಲಿದ್ದರು. ಶಾಸ್ತ್ರೀಯ ಸಂಗೀತ ಪ್ರೇಮಿಗಳು ತಲೆದೂಗುತ್ತಿದ್ದರು.
ಅಷ್ಟರಲ್ಲಿಯೇ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕಲಾವಿದರಿಗೆ ಒಂದು ಚೀಟಿ ಬಂದಿದೆ. ಅಚ್ಚರಿಗೊಂಡ ಕಲಾವಿದರು ತಲೆ ಅಲ್ಲಾಡಿಸಿ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ.
ಅರೆ, ಏನಾಯಿತು ಎಂದು ಅಲ್ಲಿದ್ದವರೆಲ್ಲಾ ನೋಡುವಷ್ಟದಲ್ಲಿ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ವೇದಿಕೆ ಏರಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ ತಮ್ಮ ರಾಜಕಾರಣದ ಭಾಷಣ ಮಾಡಿ ವೇದಿಕೆಯಿಂದ ಹೋಗಿದ್ದಾರೆ. ನಂತರ ಅರ್ಧಕ್ಕೆ ನಿಂತಿರುವ ಕಾರ್ಯಕ್ರಮ ಮುಂದುವರೆದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಛೀಮಾರಿಗಳ ಸುರಿಮಳೆಯೇ ಆಗುತ್ತಿದೆ. ರಾಜಮನೆತನದವರಾಗಿಯೂ ಶಾಸ್ತ್ರೀಯ ಸಂಗೀತಕ್ಕೆ ಮಾಡಿರುವ ಅವಮರ್ಯಾದೆ ನಾಚಿಕೆಗೇಡು ಎಂದು ಹಲವರು ಹೇಳಿದರೆ, ಇವರು ರಾಜಕೀಯ ಕ್ಷೇತ್ರಕ್ಕೇ ಕಪ್ಪುಚುಕ್ಕೆ ಎಂದು ಬಣ್ಣಿಸಿದ್ದಾರೆ ಹಲವರು.
ಶಾಂತನು ನಂದನ್ ಎನ್ನುವವರು ಶೇರ್ ಮಾಡಿರುವ ಈ ವಿಡಿಯೋ ಹಾಗೂ ಅದಕ್ಕೆ ಬಂದಿರುವ ಕಮೆಂಟ್ಗಳು ಈ ಲಿಂಕ್ನಲ್ಲಿವೆ ನೋಡಿ:
https://m.facebook.com/story.php?story_fbid=10157543771657132&id=632942131
ಟಿಆರ್ಪಿ ತಿರುಚಲು ಲಕ್ಷ ಲಕ್ಷ ಲಂಚ- ವಸ್ತುಗಳು ಗಿಫ್ಟ್: ಕೋರ್ಟ್ಗೆ ಮಾಹಿತಿ ನೀಡಿದ ಪೊಲೀಸರು
ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…
ಧರ್ಮೇಗೌಡರ ಡೆತ್ನೋಟ್ ಸಿಕ್ಕಿದೆ- ಅದರಲ್ಲಿ ಅನೇಕ ರಹಸ್ಯಗಳಿವೆ: ಸಿಎಂ ಯಡಿಯೂರಪ್ಪ