ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಹಳೇ ಬೆಂಗಳೂರು ಲೇಔಟ್ ನಿವಾಸಿ ತಬ್ರೇಜ್ (35) ಬಂಧಿತ. ಸಗಾಯ್ಪುರ ವಾರ್ಡ್ನ ಎಸ್ಡಿಪಿಐ ಸದಸ್ಯ ತಬ್ರೇಜ್, ಪಾಪ್ಯುಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ರಾಜಕೀಯ ಸಂಘಟನೆ ಜತೆ ಗುರುತಿಸಿಕೊಂಡಿದ್ದ. ಡಿಜೆ ಹಳ್ಳಿ ಪೊಲೀಸ್ ಮೇಲೆ ದಾಳಿಗೆ ಸಂಚುರೂಪಿಸಿದ್ದ. ಅಲ್ಲದೆ, ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಗಲಭೆಗೆ ಪ್ರಚೋದನೆ ಕೊಟ್ಟಿದ್ದಾನೆ. ಸಾರ್ವಜನಿಕರ ಮತ್ತು ಸರ್ಕಾರದ ವಾಹನಗಳು, ಆಸ್ತಿಗೆ ಹಾನಿಗೊಳಿಸುವಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಸಂಬಂಧಿ ನವೀನ್, ಫೇಸ್ಬುಕ್ನಲ್ಲಿ ವಿವಾದಾತ್ಮಕ ಹೇಳಿಕೆ ಅಪ್ಲೋಡ್ ಮಾಡಿದ್ದ. ಈ ಹಿನ್ನೆಲೆಯಲ್ಲಿ 2020ರ ಆಗಸ್ಟ್ 11ರಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣೆ ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಿ ಗಲಭೆ ನಡೆಸಿದ್ದರು. ತನಿಖೆ ಕೈಗೊಂಡ ಎನ್ಐಎ ಅಧಿಕಾರಿಗಳು, 138 ಮಂದಿಯನ್ನು ಬಂಧಿಸಿ ಫೆಬ್ರವರಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ಆರೋಪಿ ತಬ್ರೇಜ್ ಕುರಿತು ತಲೆಮರೆಸಿಕೊಂಡಿರುವುದಾಗಿ ಉಲ್ಲೇಖಿಸಿದ್ದರು.
ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ವಾಟ್ಸ್ಆ್ಯಪ್ಗಳಲ್ಲಿ ಪ್ರಚೋದಾತ್ಮಕ ಹೇಳಿಕೆಗಳನ್ನು ವೈರಲ್ ಮಾಡಿ ಕೆ.ಜಿ.ಹಳ್ಳಿ ಠಾಣೆ ಮುಂದೆ ಗುಂಪು ಸೇರಿಸಿದ್ದರು. ಪೊಲೀಸರ ಮೇಲೆ ಮತ್ತು ನಾಗರಿಕರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ನಡೆಸಿದ್ದರು. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಉಂಟು ಮಾಡಿದ್ದರು. ಠಾಣೆಗೂ ಬೆಂಕಿ ಹಚ್ಚಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಎನ್ಐಎ ಉಲ್ಲೇಖಿಸಿತ್ತು. ಗಲಭೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲಾ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದರ್ಶನ!