ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಭಾರಿ ಶಾಕ್ ನೀಡಿದೆ. ದಾಳಿ ನಡೆಸಿರುವ ಇಲಾಖೆ ಪವಾರ್ ಅವರ ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಬೇನಾಮಿ ಆಸ್ತಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇವರಿಗೆ ಈ ಮೊದಲು ಐಟಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಇದೀಗ ಆಸ್ತಿ ಜಪ್ತಿ ಮಾಡಿಕೊಂಡಿದೆ. ಈಗ ಜಪ್ತಿ ಮಾಡಿಕೊಂಡಿರುವ ಆಸ್ತಿ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ್ದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಪೈಕಿ, ಜರಂದೇಶ್ವರದಲ್ಲಿ ಇರುವ ಸುಮಾರು 600 ಕೋಟಿ ರೂ.ಮೌಲ್ಯದ ಸಕ್ಕರೆ ಕಾರ್ಖಾನೆ, ಗೋವಾದಲ್ಲಿರುವ 250 ಕೋಟಿ ರೂ.ಬೆಲೆಯ ರೆಸಾರ್ಟ್, ದಕ್ಷಿಣ ದೆಹಲಿಯಲ್ಲಿರುವ 20 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್, ಮಗ ಪಾರ್ಥ ಅವರ ಹೆಸರಲ್ಲಿರುವ ಸುಮಾರು 25 ಕೋಟಿ ರೂ.ಬೆಲೆಯ ಕಚೇರಿ ಸೇರಿವೆ. ಇವಿಷ್ಟೇ ಅಲ್ಲದೇ, ಮಹಾರಾಷ್ಟ್ರದ ವಿವಿಧ 27 ಪ್ರದೇಶಗಳಲ್ಲಿರುವ 500 ಕೋಟಿ ರೂ.ಮೌಲ್ಯದ ಭೂಮಿಯನ್ನು ಬೇನಾಮಿ ಆಸ್ತಿಗಳೂ ಇದ್ದು, ಎಲ್ಲವನ್ನೂ ಇಲಾಖೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಈ ನಡುವೆ ಅಜಿತ್ ಪವಾರ್ಗೆ ಮೂರು ತಿಂಗಳ ಗಡುವನ್ನು ಐಟಿ ಇಲಾಖೆ ನೀಡಿದೆ. ಇವ್ಯಾವುವೂ ಬೇನಾಮಿ ಅಲ್ಲ, ಬದಲಿಗೆ ಕಾನೂನುಬದ್ಧವಾದದ್ದು ಎಂದು ದಾಖಲೆ ಸಲ್ಲಿಸಿದರೆ ಅದನ್ನು ವಾಪಸ್ ಮಾಡಲಾಗುವುದು ಎಂದಿದೆ.
ಅಂದ ಹಾಗೆ ಕಳೆದ ತಿಂಗಳು ಕೂಡ ಐಟಿ ಇಲಾಖೆ 184 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿ ನೋಟಿಸ್ ನೀಡಿದೆ. ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಕೂಡ ಇಡಿ ಅಧಿಕಾರಿಗಳಿಂದ ಬಂಧಿತರಾಗಿದ್ದಾರೆ.
ಮೊದಲ ರಾತ್ರಿಯೇ ಪತ್ನಿಯ ಮುನಿಸು: ಕಾರಣ ಕೇಳಿ ಬೆಚ್ಚಿಬಿದ್ದ ಗಂಡ ತೆಗೆದುಕೊಂಡ ದಿಟ್ಟ ನಿರ್ಧಾರ- ಶ್ಲಾಘನೆಗಳ ಮಹಾಪೂರ
ಏಕೈಕ ಪುತ್ರನ ಉಸಿರು ಇನ್ನೇನು ನಿಲ್ಲಲಿದೆ ಎಂದಾಗ ಅಪ್ಪ-ಅಮ್ಮ ತೆಗೆದುಕೊಂಡರು ಬಹು ದೊಡ್ಡ ನಿರ್ಧಾರ…