ಲಖನೌ (ಉತ್ತರ ಪ್ರದೇಶ): ಇಡೀ ದೇಶದ ಕಣ್ಣು ಇದೀಗ ಲಖನೌ ಸಿಬಿಐನ ವಿಶೇಷ ಕೋರ್ಟ್ನತ್ತ ನೆಟ್ಟಿದೆ.
ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ಹಾಜರು ಇರುವಂತೆ ಕೋರ್ಟ್ ಈ ಹಿಂದೆ ಸೂಚಿಸಿತ್ತು.
ಆದರೆ ಉಮಾಭಾರತಿ ಅವರು ಕರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕೋರ್ಟ್ನಿಂದ ವಿನಾಯಿತಿ ಕೋರಿದ್ದಾರೆ. ಅದೇ ವೇಳೆ ಎಲ್.ಕೆ.ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅವರು ತಮ್ಮ ವಯಸ್ಸಿನ ಆಧಾರದ ಮೇಲೆ ಕೋರ್ಟ್ ಹಾಜರಿಯಿಂದ ವಿನಾಯಿತಿ ಕೇಳಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಆಗಲಿದ್ದಾರೆ.
ಇದಾಗಲೇ ಆರೋಪಿ ಪಟ್ಟಿಯಲ್ಲಿರುವ ಇತರ ಮುಖಂಡರಾದ ಸಾಧ್ವಿ ರಿತಂಬರ್, ಸಾಕ್ಷಿ ಮಹಾರಾಜ್ ಮತ್ತು ಚಂಪತ್ ರಾಯ್ ಬನ್ಸಾಲ್ ಸೇರಿದಂತೆ 26 ಮಂದಿ ಆರೋಪಿಗಳು ಕೋರ್ಟ್ ತಲುಪಿದ್ದಾರೆ. ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದರ್ ತೀರ್ಪು ಪ್ರಕಟಿಸಲಿದ್ದಾರೆ.
ಕಾನೂನು ತಜ್ಞರ ಪ್ರಕಾರ, ಅಪರಾಧ ಸಾಬೀತಾದರೆ, ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಭರ, ಮಹಂತ್ ಗೋಪಾಲ್ ದಾಸ್, ಚಂಪತ್ ರಾಯ್ ಬನ್ಸಾಲ್, ರಾಮ್ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಸತೀಶ್ ಪ್ರಧಾನ್ ಅವರಿಗೆ ಐದು ವರ್ಷಗಳವರೆಗೆ ಗರಿಷ್ಠ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿನ ಅಡಿ ಇದೆ. ಅದೇ ರೀತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತು ಆ ವೇಳೆ ಅಯೋಧ್ಯೆ ಜಿಲ್ಲಾಧಿಕಾರಿಯಾಗಿದ್ದ ಆರ್.ಎನ್. ಶ್ರೀವಾಸ್ತವ ಅವರಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಡಿ ಇದೆ.
ಇದೆ ವೇಳೆ 25 ಅತಿಸೂಕ್ಷ್ಮ ವಲಯಗಳನ್ನು ಉತ್ತರ ಪ್ರದೇಶದಲ್ಲಿ ಗುರುತಿಸಲಾಗಿದ್ದು, ಅತಿ ಅತ್ಯಂತ ಎಚ್ಚರಿಕೆ ವಹಿಸಲಾಗಿದೆ. ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಆರೋಪಿಗಳು ತಮ್ಮ ಹೆಸರಿನ ಮುಂದೆ ಟಿಕ್ ಮಾಡಿ ಕೋರ್ಟ್ ಪ್ರವೇಶ ಮಾಡಿದ್ದಾರೆ. ಬೆಂಬಲಿಗರನ್ನು ಕೋರ್ಟ್ ಹೊರಗಡೆಯ ದ್ವಾರದಲ್ಲಿಯೇ ತಡೆಯಲಾಗಿದೆ. ಅದೇ ರೀತಿ ಕೋರ್ಟ್ನ ಸುತ್ತಮುತ್ತಲೂ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಬ್ಯಾರಿಕೇಡ್ಗಳನ್ನು ಕೋರ್ಟ್ ಸುತ್ತಲೂ ಹಾಕಲಾಗಿದ್ದು, ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲಾಗುತ್ತಿದೆ. ಬಸ್ಗಳ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿದೆ. ನ್ಯಾಯಾಧೀಶರಿಗೆ ಪ್ಯಾರಾ ಮಿಲಿಟರಿಯಿಂದ ವಿಶೇಷ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹಿನ್ನೆಲೆ ನಗರದಾದ್ಯಂತ ಹೈಅಲರ್ಟ್..!
ಏನಿದು ಪ್ರಕರಣ? 1992ರ ಡಿಸೆಂಬರ್ 6. ಅಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕಾರಸೇವಕರು ಧ್ವಂಸಗೊಳಿಸಿದ್ದರು. ದೇಶಾದ್ಯಂತ ಕೋಮು ಸಂಘರ್ಷ ಭುಗಿಲೆದ್ದಿತ್ತು. ಮುಂಬಯಿ ಬಾಂಬ್ ಸ್ಫೋಟ, ಗೋಧ್ರಾ ದಹನ, ಗುಜರಾತ್ ಗಲಭೆಗಳು ಕೂಡ ನಡೆದದ್ದು ಇದೇ ಸಂದರ್ಭದಲ್ಲಿ.
ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ಷೀಟ್ನಲ್ಲಿ ಹೇಳಿದೆ.
ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನಕ್ಕೆ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಅವರ ಮೇಲೆ ಆರೋಪ ಹೊರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 92 ವರ್ಷದ ಎಲ್.ಕೆ.ಅಡ್ವಾಣಿಯವರು ಜುಲೈ 24ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು. ಇನ್ನು, ಮುರುಳಿ ಮನೋಹರ್ ಜೋಷಿ ಜುಲೈ 23ರಂದು ತಮ್ಮ ಹೇಳಿಕೆ ದಾಖಲಿಸಿದ್ದು, ಇಬ್ಬರೂ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ನಿರಾಕರಿಸಿದ್ದಾರೆ.
ಒಂದು ವೇಳೆ ಅಪರಾಧ ಸಾಬೀತಾದರೆ, ಅಡ್ವಾಣಿ, ಜೋಶಿ, ಭಾರತಿ, ಕಟಿಯಾರ್, ರಿತಂಭರ, ಮಹಂತ್ ನರ್ತ್ಯ ಗೋಪಾಲ್ ದಾಸ್, ಬನ್ಸಾಲ್, ರಾಮ್ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಡಾ.ಸತೀಶ್ ಪ್ರಧಾನ್ ಅವರಿಗೆ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿನ ಅಡಿ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 351 ಸಾಕ್ಷಿದಾರರು ಹಾಗೂ 600 ಸಾಕ್ಷ್ಯಗಳನ್ನು ಸಿಬಿಐ ಇದಾಗಲೇ ಕೋರ್ಟ್ ಮುಂದೆ ಹಾಜರುಪಡಿಸಿದೆ. ಸೆ.01ರಂದೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು ಇಂದು ತೀರ್ಪು ಪ್ರಕಟವಾಗಲಿದೆ.
ಇನ್ಮುಂದೆ ಈ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ: ಜಾರಿಯಾಗಲಿದೆ ಹೊಸ ಕಾನೂನು