ಮಾನ್ವಿ: ತಾಪಂಗೆ ನಿರ್ಮಲ ಭಾರತ ಅಭಿಯಾನದಡಿ ನೀಡಲಾಗಿರುವ ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರ 11 ವರ್ಷಗಳಿಂದ ಬಳಸದೆ ಇರುವುದರಿಂದ ತುಕ್ಕು ಹಿಡಿಯುತ್ತಿದ್ದು, ಸರ್ಕಾರದ ಲಕ್ಷಾಂತರ ರೂ. ಪೋಲಾದಂತಗಿದೆ.
ಜಿಪನಿಂದ 2012ನೇ ಸಾಲಿನಲ್ಲಿ ನಿರ್ಮಲ ಭಾರತ ಅಭಿಯಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಮಾನ್ವಿ, ದೇವದುರ್ಗ, ಸಿಂಧನೂರು, ರಾಯಚೂರು ಮತ್ತು ಲಿಂಗಸೂಗೂರು ತಾಪಂಗೆ ನೀಡಲಾಗಿತ್ತು. ಈ ಯಂತ್ರಗಳು ಒಂದು ದಿನವೂ ಕಾರ್ಯನಿರ್ವಹಿಸದೆ ಇರುವುದರಿಂದ ಜನಪರ ಕೆಲಸಗಳಿಗೆ ತೊಂದರೆಯಗುದೆ.
ಇದನ್ನೂ ಓದಿ: ಸ್ವಸಹಾಯ ಮಹಿಳಾ ಸಂಘಗಳಿಗೆ ಯಂತ್ರೋಪಕರಣ
ತಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಗೃಹದ ಸೆಪ್ಟಿಕ್ ಟ್ಯಾಂಕ್ ತುಂಬಿದರೆ ಸ್ವಚ್ಛಗೊಳಿಸುವುದಕ್ಕಾಗಿ ಸಕ್ಕಿಂಗ್ ಯಂತ್ರ ಖರೀದಿಸಲಾಗಿದೆ. ಆದರೆ, ಸಕ್ಕಿಂಗ್ ಯಂತ್ರ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನಿಂತಲ್ಲೇ ನಿಂತಿದೆ. ಸಾರ್ವಜನಿಕರು ಹೆಚ್ಚಿನ ಹಣ ನೀಡಿ ಖಾಸಗಿ ಸಕ್ಕಿಂಗ್ ಯಂತ್ರದ ಮೊರೆ ಹೋಗುವಂತಾಗಿದೆ.
ನೋಂದಣಿಯಾಗದ ವಾಹನ
ಖಾಸಗಿ ವ್ಯಕ್ತಿಗಳು ವಾಹನ ಖರೀದಿಸಿದ ತಿಂಗಳೊಳಗೆ ವಾಹನ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ದಂಡ ಹಾಕುವ ಆರ್ಟಿಒ ಅಧಿಕಾರಿಗಳು 11 ವರ್ಷವಾದರೂ ಟ್ರ್ಯಾಕ್ಟರ್ ನೋಂದಣಿ ಮಾಡಿಸಿಲ್ಲ. ವಾಹನದ ನೀಡಿದ ಪುಣೆಯ ಎನ್ವಿಆರ್ ಇಂಜನಿಯರಿಂಗ್ ಕಂಪನಿ ತಾಪಂ ಅಧಿಕಾರಿಗಳಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಜಿಪಂ ಸಿಇಒಗೆ ಪತ್ರ
ಸಕ್ಕಿಂಗ್ ಯಂತ್ರ ಯಾರು ಚಲಾಯಿಸಬೇಕು, ನೋಂದಣಿ ವೆಚ್ಚದ ಕುರಿತು ಜಿಪಂ ಸಿಇಒಗೆ ಹಿಂದಿನ ತಾಪಂ ಅಧಿಕಾರಿ ಶರಣಬಸವ 2014 ಜೂನ್ 26 ರಂದು ಪತ್ರ ಬರೆದಿದ್ದರು. ಈ ಪತ್ರಕ್ಕೆ ಜಿಪಂ ಅಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ.
ಲಕ್ಷಾಂತರ ರೂ. ವೆಚ್ಚ ಮಾಡಿ ಖರೀದಿಸಿದ ಸಕ್ಕಿಂಗ್ ಮಿಷನ್ ಹಾಗೂ ಟ್ರ್ಯಾಕ್ಟರ್ ತುಕ್ಕು ಹಿಡಿಯುತ್ತಿದೆ. ತಾಪಂ ಅಧಿಕಾರಿಗಳು ವಾಹನದ ಸದ್ಬಳಕೆಗೆ ಕ್ರಮಕೈಗೊಂಡು ಜನರಿಗೆ ಸದುಪಯೋಗ ಕಲ್ಪಿಸಬೇಕು.
ಸದಸ್ಯರ ಪ್ರಶ್ನೆಯಿಂದ ಪತ್ತೆ
ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರ ಅಧಿಕಾರಿಗಳ ಗಮನಕ್ಕೆ ಇಲ್ಲದೆ 2020ರ ಅ .11ರ ರಾತ್ರಿ ಮಾಯವಾಗಿದ್ದವು. ಒಂದು ವಾರದ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮತ್ತು ಸದಸ್ಯರ ಗಮನಕ್ಕಿಲ್ಲದೆ ಯಂತ್ರಗಳು ಎಲ್ಲಿ ಹೋಗಿವೆ. ಯಾರು ಮಾರಾಟ ಮಾಡಿದ್ದಾರೆ ಎಂದು ತಾಪಂ ಅಧಿಕಾರಿಗಳನ್ನು ಸದಸ್ಯರು ಪ್ರಶ್ನೆ ಮಾಡಿದ್ದರು. 2ರಿಂದ 3 ದಿನಗಳ ನಂತರ ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರ ನಿರ್ದಿಷ್ಟ ಜಾಗದಲ್ಲಿ ನಿಂತಿದ್ದವು.
ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸರ್ಕಾರ ಟ್ರ್ಯಾಕ್ಟರ್ ಸಮೇತ ಸಕ್ಕಿಂಗ್ ಮಿಷನ್ ನೀಡಿದೆ. ಆದರೆ, ಬಳಕೆಯಿಲ್ಲದೆ ಟ್ರ್ಯಾಕ್ಟರ್ ಸಂಪೂರ್ಣ ಹಾಳಾಗಿ ಹೋಗುತ್ತಿದೆ. ಸೆಫ್ಟಿಕ್ ಟ್ಯಾಂಕ್ ತುಂಬಿದಾಗ ಖಾಲಿ ಮಾಡಲು ಖಾಸಗಿ ಯಂತ್ರಗಳ ಮಾಲೀಕರು ಕೇಳಿದಷ್ಟು ಹಣ ಕೋಡಬೇಕಾಗಿದೆ. ತಾಪಂ ಅಧಿಕಾರಿಗಳು ವಾಹನದ ಸದ್ಬಳಕೆಗೆ ಕ್ರಮ ಕೈಗೊಂಡು ಸರ್ಕಾರದ ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.
| ಚಿನ್ನಪ್ಪ ಪಟ್ಟದಕಲ್, ಸ್ಥಳೀಯ ನಿವಾಸಿ, ಮಾನ್ವಿಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರದ ಬಳಕೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಯೋಜನೆ ಉದ್ದೇಶ ಪರಿಶೀಲಿಸಿ ಸಾರ್ವಜನಿಕರ ಉಪಯೋಗಕ್ಕೆ ಕ್ರಮ ಕೈಗೊಳ್ಳಲಾಗುವುದು.
| ಖಾಲೀದ್ ಆಹ್ಮದ್, ತಾಪಂ ಪ್ರಭಾರ ಇಒ, ಮಾನ್ವಿ