ಶಿವಮೊಗ್ಗ: ರುದ್ರಾಕ್ಷಿ ಧಾರಣೆಯಿಂದ ಒತ್ತಡವನ್ನು ನಿಯಂತ್ರಿಸಬಹುದಲ್ಲದೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗೋಣಿಬೀಡಿನ ಶ್ರೀ ಶೀಲ ಸಂಪಾದನಾ ಮಠದಲ್ಲಿ ಶನಿವಾರ ಶ್ರೀ ಶೀಲ ಸಂಪಾದನಾ ಮಠ ಸ್ಪಿರಿಚ್ಯುವಲ್ ಫೌಂಡೇಷನ್ನಿಂದ ಭದ್ರೆಯ ಮಡಿಲಲ್ಲಿ ಪವಿತ್ರ ಸ್ಥಾನ ಹಾಗೂ ರುದ್ರಾಕ್ಷಿ ಮಾಲೆ ಧಾರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ರುದ್ರಾಕ್ಷಿ ಧರಿಸುವುದರಿಂಧ ಇಂದ್ರಿಯಗಳ ಶಕ್ತಿ ಸಹ ಹೆಚ್ಚುತ್ತದೆ. ಅಲ್ಲದೆ ಆಧ್ಯಾತ್ಮಿಕತೆಯ ಪ್ರಬಲ ಸುರಕ್ಷಾ ಕವಚ ಸಹ ಸೃಷ್ಟಿಯಾಗುತ್ತದೆ. ರುದ್ರಾಕ್ಷಿ ಪ್ರಕೃತಿ ಮತ್ತು ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯನ್ನು ಒಟ್ಟುಗೂಡಿಸುತ್ತದೆ. ಜೀವನದ ಎಲ್ಲ ಕೆಲಸಗಳನ್ನು ಸಕಾರಾತ್ಮಕಗೊಳಿಸುತ್ತದೆ. ಆಧ್ಯಾತ್ಮಿಕ ಅನ್ವೇಷಕರು ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ದೈವತ್ವದ ಉಪಸ್ಥಿತಿ ಜಾಗೃತಗೊಳ್ಳುತ್ತದೆ ಎಂದು ಅಭಿಪಟ್ಟರು.
ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ಅಂತಯೇ ಮನಷ್ಯನು ದುರ್ಗಣಗಳಿಂದ ಸದ್ಗುಣದ ಕಡೆಗೆ ಸಾಗಲಿ. ಸನ್ಮಾರ್ಗದಲ್ಲಿ ನಡೆಯಲಿ. ದೈಹಿಕ ಹಾಗೂ ಮಾನಸಿಕ ದೋಷ ನಿವಾರಣೆಯಾಗುವ ಪರ್ವ ಕಾಲ ಇದಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಭಕ್ತರಿಗೆ ಡಾ. ಸಿದ್ಧಲಿಂಗ ಶ್ರೀಗಳು ರುದ್ರಾಕ್ಷಿ ಮಾಲೆ ಅನುಗ್ರಹ ಕರುಣಿಸಿದರು. ಆಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಬೆಳಗಾವಿಯ ಪಾಟೀಲ ವಿಜಯಕುಮಾರ್, ಚೆನ್ನಪ್ಪ ಇಕ್ಲಾಸಪುರ ಉಪಸ್ಥಿತರಿದ್ದರು.