ನಾಗ್ಪುರ: ಕರೊನಾ ವೈರಸ್ನಿಂದ ಭಾರತ ಸಂಪೂರ್ಣ ಲಾಕ್ಡೌನ್ ಆದ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಆರ್ಎಸ್ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್ ಅವರು, ದೇಶದ ಜನತೆಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಸಾಂಕ್ರಾಮಿಕ ಕರೊನಾ ವಿರುದ್ಧ ಹೋರಾಡಲು ಎಲ್ಲರೂ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಕರೆ ಕೊಟ್ಟ ಮೋಹನ್ ಭಾಗವತ್ ಅವರು, ಈ ಕೊವಿಡ್ ಪರಿಸ್ಥಿತಿಯನ್ನು ಕೆಲವು ದೇಶ ವಿರೋಧಿ ಗುಂಪುಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಅಂಥವರ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊವಿಡ್ನಿಂದ ಉಂಟಾಗಿರುವ ಈ ಸಂಕಷ್ಟ, ಆತಂಕದ ಪರಿಸ್ಥಿತಿಯಲ್ಲಿ ಭಾರತ್ ತೇರೆ ತುಕ್ಡೆ ಹೋಂಗೆ ಗ್ಯಾಂಗ್ನ ಸದಸ್ಯರು ಉಳಿದ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ. ಇದರಲ್ಲಿ ಕೆಲವು ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಆದರೆ ಯಾರೂ ಸಿಟ್ಟಾಗಬೇಡಿ…ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಏಕಸ್ಥಾಯಿಯಿಂದ ಹೋರಾಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದಿಂದ ವಿಡಿಯೋ ಮೂಲಕ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್ ಮರ್ಖಜ್ನಲ್ಲಿ ತಬ್ಲಿಘಿ ಜಮಾತ್ ನಡೆಸಿದ ಧಾರ್ಮಿಕ ಸಮಾವೇಶ, ಅದಾದ ನಂತರ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್ ಅವರು, ಆ ಸಮುದಾಯದ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯದ ವಿರುದ್ಧ ನಾವು ಹಗೆ ಸಾಧಿಸಬಾರದು. ಅಂತಹ ದ್ವೇಷ ಬೆಳೆಯಲು ಅವಕಾಶ ಮಾಡಿಕೊಡಬಾರದು. ನಾವೆಲ್ಲ 130 ಕೋಟಿ ಭಾರತೀಯರೂ ಒಂದೇ ಎಂದು ಹೇಳಿದರು.
ಹಾಗೇ, ಮಹಾರಾಷ್ಟ್ರದ ಪಾಲ್ಗಾರ್ನಲ್ಲಿ ನಡೆದ ಇಬ್ಬರು ಹಿಂದು ಸಾಧುಗಳು ಮತ್ತು ಅವರ ಕಾರಿನ ಚಾಲಕನ ಹತ್ಯೆ ಬಗ್ಗೆಯೂ ಆರ್ಎಸ್ಎಸ್ ಮುಖ್ಯಸ್ಥರು ಪ್ರಸ್ತಾಪ ಮಾಡಿದರು.
ಸ್ಥಳದಲ್ಲಿದ್ದರೂ ದಾಳಿಕೋರರನ್ನು ನಿಯಂತ್ರಿಸಲಾಗದ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾನೂನು ಕೈಗೆ ತೆಗೆದುಕೊಂಡ ದುಷ್ಕರ್ಮಿಗಳನ್ನೂ ದೂಷಿಸಿದರು.
ಪ್ರಸ್ತುತ ಪರಿಸ್ಥಿತಿ ಮತ್ತು ಇದರಲ್ಲಿ ನಮ್ಮ ಪಾತ್ರ ಎಂಬ ವಿಚಾರದ ಬಗ್ಗೆ ಮಾತನಾಡಿದ ಮೋಹನ್ ಭಾಗವತ್, ನಾವು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಮತ್ತು ನಮ್ಮ ಸುತ್ತಲಿನ ಪರಿಸರವನ್ನೂ ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಲಾಕ್ಡೌನ್ನಿಂದ ಸಂತ್ರಸ್ತರಾಗಿರುವ ಅನೇಕ ಜನರಿಗೆ ದೇಶಾದ್ಯಂತ ಆರ್ಎಸ್ಎಸ್ ಸಹಾಯಹಸ್ತ ಚಾಚಿದೆ. ದೇಶದ 55,000 ಪ್ರದೇಶಗಳಲ್ಲಿ ಸುಮಾರು ಮೂರು ಲಕ್ಷ ಸ್ವಯಂ ಸೇವಕರು ಬಡವರಿಗೆ, ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಊಟ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಆರ್ಎಸ್ಎಸ್ ತನ್ನ ಸಂಪರ್ಕ ಬಳಸಿ 33 ಲಕ್ಷ ರೇಷನ್ ಕಿಟ್ಗಳನ್ನು ಅಗತ್ಯ ಇರುವವರಿಗೆ ವಿತರಣೆ ಮಾಡಿದೆ. (ಏಜೆನ್ಸೀಸ್)