ನವದೆಹಲಿ: ಮಹಾಮಾರಿ ಕರೊನಾದಿಂದ ರೋಗಿಗಳನ್ನು ರಕ್ಷಿಸುತ್ತಿರುವ ವೈದ್ಯರು ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯೇನಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಒಂದು ಕೋಟಿ ರೂ. ಪರಿಹಾರ ನೀಡುವುದಾಗಿ ಇಂದು ಮಧ್ಯಾಹ್ನ ಘೋಷಣೆ ಮಾಡಿದ್ದಾರೆ.
ಯುದ್ಧದ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಯೋಧರು ನಮ್ಮ ದೇಶವನ್ನು ರಕ್ಷಿಸುತ್ತಾರೆ. ಅದಕ್ಕಾಗಿ ಇಡೀ ನಮ್ಮ ರಾಷ್ಟ್ರವು ಕೂಡ ಅವರಿಗಾಗಿ ಋಣಿಯಾಗಿರುತ್ತದೆ. ಇಂದು ಆರೋಗ್ಯ ಸಿಬ್ಬಂದಿ ಮಾಡುತ್ತಿರುವ ಕೆಲಸ ಯೋಧರ ಕೆಲಸಕ್ಕಿಂತ ಕಡಿಮೆಯೇನಲ್ಲ. ಈ ದೇಶದ ಜನತೆಯ ಪ್ರಾಣವನ್ನು ಉಳಿಸಲು ನಿಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡಿದ್ದೀರಾ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯೋಧರೇನಾದರೂ ದೇಶಕ್ಕಾಗಿ ಮಡಿದರೇ ಒಂದು ಕೋಟಿ ರೂ. ಪರಿಹಾರವನ್ನು ಯೋಧನ ಕುಟುಂಬಕ್ಕೆ ನೀಡಲಾಗುವುದು ಎಂದು ಈ ಮುಂಚೆ ದೆಹಲಿ ಸರ್ಕಾರ ಮಾಡಿದ್ದ ಘೋಷಣೆಯನ್ನು ಆರೊಗ್ಯ ಸಿಬ್ಬಂದಿಗೂ ಘೋಷಿಸಿದೆ. ಕಿಲ್ಲರ್ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ಗಳು ಅಥವಾ ನೈರ್ಮಲ್ಯ ಸಿಬ್ಬಂದಿ ಮೃತರಾದರೆ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ ಒಂದು ಕೋಟಿ ರೂ. ನೀಡಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 120 ಕರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಒಟ್ಟಾರೆ ದೇಶದಲ್ಲಿ 1600ಕ್ಕೂ ಹೆಚ್ಚು ಮಂದಿ ಸೋಂಕು ತಗುಲಿದೆ. (ಏಜೆನ್ಸೀಸ್)
ದೇಶದಲ್ಲಿ 1,637ಕ್ಕೆ ಏರಿತು ಸೋಂಕಿತರ ಸಂಖ್ಯೆ,38 ಸಾವು: ಕರ್ನಾಟಕದಲ್ಲಿ 105ಕ್ಕೇರಿತು ಸೋಂಕಿತರ ಸಂಖ್ಯೆ