ಬೆಂಗಳೂರು: ಆರ್ ಆರ್ ನಗರದ ಉಪಚುನಾವಣೆ ರಂಗೇರಿದ್ದು, ಮೂರೂ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಬಿರುಸಿನ ಪ್ರಚಾರ ನಡೆಸುತ್ತಿದ್ದು, ಮತದಾರರ ಮನವೊಲಿಸುವಲ್ಲಿ ಬಿಜಿಯಾಗಿವೆ. ಈ ನಡುವೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ, ಸಾವಿರಾರು ಜನರ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾ, ‘ಕಣ್ಣೀರಾಕಿ ಗಿಮಿಕ್ ಮಾಡೋದನ್ನು ನನ್ನ ತಂದೆ-ತಾಯಿ ನನಗೆ ಕಲಿಸಿಲ್ಲ. ನನ್ನಲ್ಲಿ ನೋವಿದೆ ಅದನ್ನು ಹೇಳಿಕೊಳ್ತಿದ್ದೇನೆ’ ಎನ್ನುತ್ತಾ ಮನದ ನೋವನ್ನು ಹೊರಹಾಕಿದರು.
ಶುಕ್ರವಾರ ಸಂಜೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೃಷ್ಣಮೂರ್ತಿ, ‘ನಾನು ಹರಕೆಯ ಕುರಿಯಲ್ಲ. ನನಗೆ ಏನಾದ್ರೂ ಪರವಾಗಿಲ್ಲ. ಆದ್ರೆ ಕುಮಾರಸ್ವಾಮಿಗೆ ಮಾತ್ರ ಏನೂ ಹೇಳಬೇಡಿ, ಯಾಕಂದ್ರೆ ನಾನು ಯಾವತ್ತೂ ಬೆನ್ನಗೆ ಚೂರಿ ಹಾಕೋನಲ್ಲ. ನನ್ನ ಬಳಿ ಹಣ ಇಲ್ಲ, ಆದ್ರೆ ಜನ ಇದ್ದಾರೆ, ಕುಮಾರಣ್ಣ ಇದ್ದಾರೆ. ನಾನೊಬ್ಬ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತ’ ಎಂದು ಭಾವುಕರಾದರು.
‘ಈ ಕ್ಷೇತ್ರದಲ್ಲಿ ಹೇಗಾಗಿದೆ ಅಂದ್ರೆ ಯಾರಾದರೂ ಒಬ್ಬ ಬೆಳೆಯುತ್ತಿದ್ದಾನೆ ಅಂದ್ರೆ ಸಾಕು ಅವರನ್ನು ತುಳಿಯೋಕೆ ಅಂತಾನೇ ಕೆಲವರು ಇರ್ತಾರೆ’ ಎಂದು ವಿರೋಧಿ ಪಕ್ಷಕ್ಕೆ ಪರೋಕ್ಷವಾಗಿ ಮಾತಿನಲ್ಲೇ ಚಾಟಿ ಬೀಸಿದ ಕೃಷ್ಣಮೂರ್ತಿ, ‘ಕುಮಾರಸ್ವಾಮಿ ನನ್ನನ್ನು ಹರಕೆಯ ಕುರಿ ಮಾಡಿಲ್ಲ. ದುರುದ್ದೇಶದಿಂದಲೇ ಇಂತಹದ್ದನ್ನು ಹಬ್ಬಿಸುತ್ತಿದ್ದಾರೆ’ ಎಂದರು.
‘5 ವರ್ಷ ಜನರ ಮಧ್ಯೆ ಇರಬೇಕು ಎಂದು ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರು ವೋಟ್ ಕೊಟ್ಟರು. ತನ್ನನ್ನು ತಾನು ಮಾರಿಕೊಂಡು ಮತ್ತೆ ಬೈ ಎಲೆಕ್ಷನ್ಗೆ ಬರಲಿ ಅಂತ ಜನ ವೋಟ್ ಕೊಟ್ಟಿಲ್ಲ. ಅಂತೋರಿಗೆ ಮತ ಕೊಡ್ತೀರಾ ನೀವು?’ ಎಂದು ಸಭೆಯಲ್ಲಿ ನೆರೆದಿದ್ದವರನ್ನು ಪ್ರಶ್ನಿಸಿದ ಕೃಷ್ಣಮೂರ್ತಿ, ‘ ಕುಮಾರಣ್ಣ ಮಾಡಿರುವ ಕೆಲಸ ಕಾರ್ಯಗಳನ್ನ ಮುಂದಿಟ್ಟುಕೊಂಡು ನಿಮ್ಮ ಮುಂದೆ ಬಂದು ಮತ ಕೇಳ್ತೀದ್ದೀನಿ’ ಎಂದರು.
ಬಿಕ್ಕಿಬಿಕ್ಕಿ ಅತ್ತ ರಾಜರಾಜೇಶ್ವರಿ ನಗರದ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ!
ಬಿಕ್ಕಿಬಿಕ್ಕಿ ಅತ್ತ ರಾಜರಾಜೇಶ್ವರಿ ನಗರದ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ!ವಿವರಕ್ಕೆ https://bit.ly/2T5ggBH
Posted by Vijayavani on Saturday, October 17, 2020
ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ… ಎನ್ನುತ್ತಾ ಕಣ್ಣೀರು ಹಾಕಿದ ಗೋವಿಂದ ಕಾರಜೋಳ