ಪಿರಿಯಾಪಟ್ಟಣ: ಸೇವಾ ಚಟುವಟಿಕೆಗಳ ಮೂಲಕ ರೋಟರಿ ಸಂಸ್ಥೆ ಜನಮನ್ನಣೆಗೆ ಪಾತ್ರವಾಗಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಕೆ.ರಮೇಶ್ ತಿಳಿಸಿದರು.
ತಾಲೂಕಿನ ಸನ್ಯಾಸಿಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ಶಾಲೆಗೆ ವಾಟರ್ ಫಿಲ್ಟರ್ ವಿತರಿಸಿ ಮಾತನಾಡಿದರು. ಶಾಲೆಗೆ ಅಗತ್ಯವಿರುವ ಪ್ರತಿ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರೋಟರಿ ಸಂಸ್ಥೆಯು ನೆರವಿಗೆ ಬರಲಿದೆ ಎಂದರು.
ಶಾಲೆಯಲ್ಲಿ ಮಕ್ಕಳು ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ಈಡಾಗಬಾರದು ಎನ್ನುವ ಉದ್ದೇಶದಿಂದ ರೋಟರಿ ಐಕಾನ್ಸ್ ನ ಸದಸ್ಯ ಪಿ.ಎನ್.ಮಹದೇವ್ ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ವಾಟರ್ ಫಿಲ್ಟರ್ ನೀಡಿರುವುದು ಸ್ವಾಗತಾರ್ಹ. ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವುದರ ಜತೆಗೆ ಸೂಕ್ತ ನಿರ್ವಹಣೆ ಮಾಡುವಂತೆ ಕಿವಿಮಾತು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವತ್ತ ಗಮನಹರಿಸಿರುವುದು ಸಂತಸದ ವಿಷಯವಾಗಿದೆ. ಅದೇ ರೀತಿ ಸಂಸ್ಥೆಯ ವತಿಯಿಂದ ಶಾಲೆಯ ಮಕ್ಕಳಿಗೆ ಊಟದ ತಟ್ಟೆಗಳನ್ನು ವಿತರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಯುವಕ ಮಂಡಳಿಗೆ ಬ್ಯಾಂಡ್ ಸೆಟ್ ಪರಿಕರಗಳನ್ನು ನೀಡಲಾಯಿತು. ರೋಟರಿ ಐಕಾನ್ಸ್ ನ ನಿರ್ದೇಶಕ ಸಿ.ಎನ್.ವಿಜಯ್, ಬಿ.ಎಸ್.ಸತೀಶ್ ಆರಾಧ್ಯ, ಪಿ.ಎನ್.ಮಹದೇವ್, ಭಾನುಪ್ರಕಾಶ್, ಸತೀಶ್, ರಮೇಶ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸುರೇಶ್, ಮುಖಂಡರಾದ ರಾಘವೇಂದ್ರ, ಸ್ವಾಮಿ, ಪುಟ್ಟಣ್ಣ ಇತರರು ಇದ್ದರು.ಉಪಸ್ಥಿತರಿದ್ದರು.