ಗದಗ: ನೆಚ್ಚಿನ ನಟನ ಹುಟ್ಟುಹಬ್ಬ ಸಂಭ್ರಮ ಹಿನ್ನೆಲೆಯಲ್ಲಿ ಶುಭಾಶಯ ಕೋರುವ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ದುರಂತ ಅಂತ್ಯಕಂಡ ಮೂವರು ಅಭಿಮಾನಿಗಳ ಮನೆಗೆ ನಟ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿತು. ಮೃತರನ್ನು ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಘಡದ ಸುದ್ದಿ ತಿಳಿಯುತ್ತಿದಂತೆ ಗೋವಾದಲ್ಲಿದ್ದ ನಟ ಯಶ್, ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಗದಗಿನ ಸೂರಣಗಿ ಗ್ರಾಮಕ್ಕೆ ಕಾರಿನ ಮೂಲಕ ಆಗಮಿಸಿದರು. ಬಳಿಕ ಮೃತ ಅಭಿಮಾನಿಗಳ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಮಕ್ಕಳನ್ನು ಕಳೆದುಕೊಂಡು ಗೋಳಾಡಿದ ಕುಟುಂಬಸ್ಥರನ್ನು ಕಂಡು ಯಶ್ ಭಾವುಕರಾದರು. ಮೂವರು ಅಭಿಮಾನಿಗಳ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ತಮ್ಮ ಮಕ್ಕಳ ಮೇಲೆ ಪಾಲಕರು ಅಗಾಧ ಕನಸು ಕಂಡಿದ್ದರು. ಆದರೆ, ದುರಂತದಲ್ಲಿ ಅಕಾಲಿಕ ಮರಣ ಹೊಂದಿದ ಮಕ್ಕಳನ್ನು ನೆನೆದು ಆಕಾಶವೇ ಕಳಚಿ ಬೀಳುವಂತೆ ಪಾಲಕರು ಗೋಳಿಟ್ಟರು. ಇದನ್ನು ಕಂಡು ನಟ ಯಶ್ ಅಕ್ಷರಶಃ ಭಾವುಕರಾದರು. ಯಶ್ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಪಾಲಕರು ಹೇಳುವ ಮಾತು ಕೇಳಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಭಾವುಕರಾದರು.
ನನ್ನ ಮೇಲೆ ನನಗೇ ಬೇಸರವಾಗುತ್ತಿದೆ
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಯಶ್, ನನ್ನ ಮೇಲೆ ನನಗೇ ಬೇಜಾರಾಗುತ್ತಿದೆ. ಬ್ಯಾನರ್ ಹಾಕಲೇಬೇಕೆಂದು ನಾವು ಎಂದಿಗೂ ಇಷ್ಟಪಡುವುದಿಲ್ಲ. ಬರ್ತಡೇ ಆಚರಣೆ ಮಾಡ್ಬೇಡಿ ಎಂದು ಹೇಳಿದರೂ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳು ಖುಷಿಯಾಗಿದ್ರೆ ಅದೇ ನಮಗೆ ಸಂತೋಷ. ಇನ್ನು ಮುಂದೆ ಯಾರೂ ಕೂಡ ಬ್ಯಾನರ್ ಕಟ್ಟಬೇಡಿ ಎಂದು ನಟ ಯಶ್ ಅಭಿಮಾನಿಗಳಿಗೆ ಕರೆ ಕೊಟ್ಟರು. ಅಲ್ಲದೆ, ಮೃತ ಅಭಿಮಾನಿಗಳ ಕುಟುಂಬಕ್ಕೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರದಿಂದ ಪರಿಹಾರ
ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಯಶ್ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವು; ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
ಮಾದಕ ಫೋಟೋ ಹರಿಬಿಟ್ಟ ಹರ್ಭಜನ್ ಪತ್ನಿ! ಗೀತಾ ಬಸ್ರ ಹಾಟ್ ಅವತಾರ ಕಂಡು ಫ್ಯಾನ್ಸ್ ಕ್ಲೀನ್ ಬೋಲ್ಡ್