ಬೆಂಗಳೂರು : ನಗರದ ಸಾರಕ್ಕಿ, ಜೆ.ಪಿ. ನಗರ ವಾರ್ಡ್ಗಳಲ್ಲಿ ಸುಸ್ಥಿತಿಯಲ್ಲಿರುವ 10 ರಸ್ತೆಗಳನ್ನು 8 ಕೋಟಿ ರೂ. ವೆಚ್ಚದಲ್ಲಿ ಪುನಃ ಅಭಿವೃದ್ಧಿಗೊಳಿಸಲು ಕರೆಯಲಾಗಿರುವ ಟೆಂಡರ್ ಸ್ಥಗಿತಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಆದೇಶಿಸಿದ್ದಾರೆ.
ವರದಿ ಸಲ್ಲಿಕೆಗೆ ಸೂಚನೆ
ದೂರಿನ ಸಂಬಂಧ ಕೂಡಲೇ ಅಲ್ಪಾವಧಿ ಟೆಂಡರ್ ಸ್ಥಗಿತಗೊಳಿಸಬೇಕು. ಜತೆಗೆ, ಟೆಂಡರ್ ಪ್ರಕ್ರಿಯೆ ಕುರಿತ ಸಾಧಕ, ಬಾಧಕ, ಅಗತ್ಯತೆ ಬಗ್ಗೆ ವರದಿ ನೀಡುವಂತೆ ಪಾಲಿಕೆಯ ಟೆಕ್ನಿಕಲ್ ವಿಜಿಲೆನ್ಸ್ ಸೆಲ್ (ಟಿವಿಸಿಸಿ) ತನಿಖೆಗೆ ವಹಿಸಿ ಗೌರವ್ ಗುಪ್ತ ಆದೇಶ ಹೊರಡಿಸಿದ್ದಾರೆ. 7 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಎರಡೂ ವಾರ್ಡ್ಗಳಲ್ಲಿ ಕೆಲವೇ ದಿನಗಳ ಹಿಂದೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಿದ್ದರೂ ಪುನಃ ದುರಸ್ತಿಗೆ ಜಯನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮತ್ತು ಜೆ.ಪಿ. ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ಟೆಂಡರ್ ಕರೆದಿದ್ದಾರೆಂದು ಆರೋಪಿಸಿ ಬಿಜೆಪಿ ಬೆಂಗಳೂರು ದಕ್ಷಿಣ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಬಿಬಿಎಂಪಿ ಆಡಳಿತಾಧಿಕಾರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ದೂರು; ಸುಪ್ರೀಂಕೋರ್ಟ್ ಮುಂದಿರುವ ಆಯ್ಕೆಗಳೇನು?
ಜೆ.ಪಿ. ನಗರ ವಾರ್ಡ್ನಲ್ಲಿ ರಾಗಿಗುಡ್ಡ ಕೊಳೆಗೇರಿ ಪ್ರದೇಶದ 3 ರಸ್ತೆಗಳ ಅಭಿವೃದ್ಧಿ, ಚರಂಡಿ, ನೀರಿನ ಪೈಪ್ ಅಳವಡಿಕೆ ಮತ್ತು ಮಾರೇನಹಳ್ಳಿ ಪಾಳ್ಯದಲ್ಲಿ ರಸ್ತೆ ಅಭಿವೃದ್ಧಿಗೆ ಕಳೆದ ಸೆ.21 ರಂದು 4.96 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಇದರೊಂದಿಗೆ ಸಾರಕ್ಕಿ ವಾರ್ಡ್ನ ಕಾಶಿ ವಿಶ್ವನಾಥ ದೇವಸ್ಥಾನ, ಪಟ್ಟಾಲಮ್ಮ ದೇವಸ್ಥಾನ, ಜೆ.ಪಿ. ನಗರದ 5ನೇ ಹಂತದ ರಸ್ತೆ ಹಾಗೂ ಸಾರಕ್ಕಿ ಮುಖ್ಯ ರಸ್ತೆಯ ಅಭಿವೃದ್ಧಿಗೆ 3.05 ಕೋಟಿ ರೂ. ವೆಚ್ಚದಲ್ಲಿ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಒಟ್ಟು 10 ರಸ್ತೆಗಳ ಅಭಿವೃದ್ಧಿಗೆ 7.96 ಕೋಟಿ ರೂ. ಟೆಂಡರ್ ಕರೆದು ಸಾರ್ವಜನಿಕರ ಹಣ ಲೂಟಿಗೆ ಮುಂದಾಗಿದ್ದಾರೆ ಎಂದು ರಮೇಶ್ ಆರೋಪಿಸಿದ್ದರು.
ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ – ಕೋವಿಡ್ ಜಾಗೃತಿ ತೆರವುಗೊಳಿಸಿರುವ ಮಾಹಿತಿಗೆ ಆದೇಶ