ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ 75ರ ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇಪಿಸಿ ಯೋಜನೆಯಡಿ 2 ಪ್ಯಾಕೇಜ್ಗಳನ್ನಾಗಿ ವಿಂಗಡಿಸಲಾಗಿದ್ದು, ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಬಿ.ಸಿ.ರೋಡ್-ಅಡ್ಡಹೊಳೆ ರಸ್ತೆ ಕಾಮಗಾರಿ 2 ವರ್ಷದಿಂದ ಯಾವುದೇ ಪ್ರಗತಿ ಕಾಣದಿರುವ ಕುರಿತು, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅಧಿವೇಶನದಲ್ಲಿ ಕೇಳಿರುವ ಚುಕ್ಕಿ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಮೊದಲು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಎಲ್ ಆ್ಯಂಡ್ ಟಿ ಸಂಸ್ಥೆಯ ಆರ್ಥಿಕ ಮುಗ್ಗಟ್ಟಿನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಪ್ರಸ್ತುತ ಪ್ಯಾಕೇಜ್ 1ರಲ್ಲಿ ಪೆರಿಯಶಾಂತಿಯಿಂದ ಅಡ್ಡಹೊಳೆವರೆಗೆ 255.70 ಕಿ.ಮೀ.ನಿಂದ 270.27 ಕಿ.ಮೀ.ವರೆಗಿನ 14.45 ಕಿ.ಮೀ. ರಸ್ತೆಯನ್ನು ಎಸ್.ಎಂ.ಔತಾಡೆ ಪ್ರೈ.ಲಿ. ಸಂಸ್ಥೆಗೆ 317.54 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ವಹಿಸಲಾಗಿದೆ. ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಪ್ಯಾಕೇಜ್ 2ರಲ್ಲಿ ಅಡ್ಡ ಹೊಳೆಯಿಂದ ಬಂಟ್ವಾಳದವರೆಗೆ 270.27ರಿಂದ 318.55 ಕಿ.ಮೀ.ವರೆಗಿನ 48.28 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಕಲ್ಲಡ್ಕ ಪೇಟೆಗೆ ಮೇಲ್ಸೇತುವೆ, ಅಪ್ರೋಚ್ ರಸ್ತೆಗಳೂ ಸೇರಿವೆ ಎಂದು ಸಚಿವರು ತಿಳಿಸಿದ್ದಾರೆ.