ಹರಿಹರ: ಬೈಕ್, ಆಟೋ ಮತ್ತು ಕೆಎಸ್ಆರ್ಟಿಸಿ ಬಸ್ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟು, ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಸಮೀಪದ ಗುತ್ತೂರು ಗ್ರಾಮದ ಕೆಇಬಿ ಗ್ರಿಡ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಸಾರಥಿ ಗ್ರಾಮದ ನಾಗರಾಜ ತಂದೆ ದೀಟೂರು ತಿಪ್ಪೇಶಪ್ಪ ಮೃತ ವ್ಯಕ್ತಿ. ರಾತ್ರಿ 9.15ರ ವೇಳೆ ಹರಿಹರದಿಂದ ಹರಪನಹಳ್ಳಿ ಕಡೆಗೆ ವೇಗವಾಗಿ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಹಿಂದೆ ಬರುತ್ತಿದ್ದ ಬೈಕ್ ಸವಾರ ಹಿಂದಿಕ್ಕಲು ಹೋಗಿ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕಿಯಾಗಿದೆ.
ಬೈಕ್ ಓಡಿಸುತ್ತಿದ್ದ ನಾಗರಾಜ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆ, ಬೈಕ್ನ ಹಿಂದೆ ಕುಳಿತಿದ್ದ ಸಾರಥಿ ಗ್ರಾಮದ ಶಿವು ಮತ್ತು ಕೊಂಡಜ್ಜಿ ಗ್ರಾಮದ ರಾಘು ಗಾಯಗೊಂಡಿದ್ದಾರೆ. ಆಟೋ ಚಾಲಕ ನಜೀರ್ ಸಾಬ್ ನೀಡಿದ ದೂರು ಆಧರಿಸಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.