ಗಂಗಾವತಿ: ಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಬೇಕು ಎಂದು ಒತ್ತಾಯಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ದಸಂಸ ರಾಜ್ಯ ಸಂ.ಸಂಚಾಲಕ ಹುಸೇನಪ್ಪ ಹಂಚಿನಾಳ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪಠ್ಯಪುಸ್ತಕ ರಚಿಸಲಾಗಿದ್ದು, ದಾರ್ಶನಿಕರು ಮತ್ತು ಹಿರಿಯ ಸಾಹಿತಿಗಳನ್ನು ಅವಮಾನಿಸಲಾಗಿದೆ. ಈಗಾಗಲೇ ಪೂರೈಕೆಯಾಗಿರುವ ಹೊಸ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು. ಶಿಕ್ಷಣ ಸಚಿವ ಬಿ.ಸಿ.ನಾಗೇಶ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕ್ರಾಂತಿ ಗೀತೆಗಳ ಗಾಯನ ಗಮನಸೆಳೆಯಿತು. ತಹಸೀಲ್ದಾರ್ ಯು.ನಾಗರಾಜ್ಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜೆ.ಭಾರದ್ವಾಜ್, ಗುರುಬಸವ ಬರಗೂರ, ದುರಗೇಶ, ಶರಣಬಸವ, ಚೈತ್ರಾ, ಮಹ್ಮದ್ ಸಿರಾಜ್, ವಿಕ್ರಮ್, ವೀರೇಶ, ಬಸವರೆಡ್ಡಿ ಇತರರಿದ್ದರು.