ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸೋವವಾರ ಕಂದಾಯ ಸೇವೆಗಳ ವಿಶೇಷ ಆಂದೋಲನ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಂದಾಯ ಇಲಾಖೆ ರೈತರ ಮತ್ತು ಸರ್ಕಾರದ ನಡುವಿನ ಸಂಬಂಧಗಳನ್ನು ಬೆಸೆಯುವ ಸೇತುವೆಯಂತೆ ಕಾರ್ಯನಿರ್ವಹಿಸುವ ಇಲಾಖೆಯಾಗಿದೆ. ವಿವಿಧ ಸೇವೆಗಳು ರೈತರನ್ನು ತ್ವರಿತವಾಗಿ ತಲುಪಬೇಕೆನ್ನುವ ಉದ್ದೇಶದಿಂದ ಆಂದೋಲನದ ರೀತಿಯಲ್ಲಿ ಹೋಬಳಿವಾರು ಮತ್ತು ಕಂದಾಯ ವೃತ್ತವಾರು ಬಾಕಿಯಿರುವ ಅರ್ಜಿಗಳ ಮಾಹಿತಿಯನ್ನು ಪಡೆದು ಅವುಗಳ ವಿಲೇವಾರಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಆಯಾ ಕಂದಾಯ ವೃತ್ತವಾರು ನಿಯೋಜನೆಗೊಂಡಿರುವ ಉಪತಹಸೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರು ಕರ್ತವ್ಯ ನಿರ್ವಹಿಸಬೇಕು. ಮಧ್ಯಾಹ್ನ 2 ಗಂಟೆಯ ನಂತರ ಕಚೇರಿಗೆ ತೆರಳಿ, ಬರಪರಿಹಾರ ವಿತರಣೆ, ಮಳೆಹಾನಿ, ಲ್ಯಾಂಡ್ ಮ್ಯಾಪಿಂಗ್, ಬಗರ್ಹುಕುಂ, ಕಂದಾಯಗ್ರಾಮ ರಚನೆ ಮುಂತಾದ ಕಾರ್ಯಗಳನ್ನು ನಿರ್ವಹಿಸಬೇಕು. ಸರ್ಕಾರ ಆದೇಶದಂತೆ ಆಂದೋಲನ ಕಾರ್ಯಕ್ರಮದಲ್ಲಿ ಆಧಾರ್ ಸೀಡಿಂಗ್, ಫ್ರೂಟ್ ಅಪ್ಲಿಕೇಶನ್, ಪೌತಿ ಖಾತೆಯಂತಹ ಸೇವೆಗಳನ್ನು ನೀಡುವ ಕಾರ್ಯ ನಡೆಸಬೇಕು. ದಿನನಿತ್ಯ ಆಂದೋಲನದ ಮೂಲಕ ಆಗಿರುವ ಬೆಳವಣಿಗೆಗಳ ಕುರಿತು ತಮಗೆ ಮಾಹಿತಿ ಒದಗಿಸಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಎಂ.ನಯನಾ ಮಾತನಾಡಿ, ತಾಲೂಕಿನಾದ್ಯಂತ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಮನೆ ಬಾಗಿಲಿಗೆ ಸೇವೆ ಲಭ್ಯವಾಗುತ್ತಿದ್ದು, ಸಾರ್ವಜನಿಕರು ಮತ್ತು ರೈತರು ಕಾರ್ಕ್ರಮದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ಕೋರಿದರು.
ಉಪತಹಸೀಲ್ದಾರ್ ಅರುಣ್ಕುಮಾರ್, ರಾಜಸ್ವ ನಿರೀಕ್ಷಕ ಹೇಮಂತ್ಕುಮಾರ್, ಗ್ರಾಮಲೆಕ್ಕಿಗ ಶ್ರೀವತ್ಸ, ಪಂಚಾಯಿತಿ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.