ಬೆಳ್ತಂಗಡಿ: ಕಾಸರಗೋಡು ಮಂಜೇಶ್ವರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮುಂಡಾಜೆ ಕಾನರ್ಪ ನಿವಾಸಿ ನಿವೃತ್ತ ಯೋಧ ದಿನೇಶ್ (42) ಸಾವನ್ನಪ್ಪಿದ್ದಾರೆ.
ಮಂಜೇಶ್ವರದಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮುಂಡಾಜೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಇವರು ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಮುಗಿಸಿ 19ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು.
1998ರಲ್ಲಿ ಹೈದರಬಾದಿನ ಆರ್ಟಿಲರಿ ಗ್ರೂಪ್ನಲ್ಲಿ 19ತಿಂಗಳ ತರಬೇತಿಯನ್ನು ಪಡೆದು ಅಸ್ಸಾಂನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಬಳಿಕ ಜಮ್ಮುಕಾಶ್ಮೀರ, ಮುಂಬೈ, ನಾಸಿಕ್, ಕುಪ್ವಾಡ ಮಚಲ್ಸೆಕ್ಟರ್, ಕೊಯಮ್ಮುತ್ತೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಹವಲ್ದಾರರಾಗಿ ನೇಮಕಗೊಂಡು ಅಸ್ಸಾಂ, ದೆಹಲಿ ಮುಂತಾದೆಡೆ ಸೇವೆ ಸಲ್ಲಿಸಿದ್ದರು.
ನಿವೃತ್ತರಾದ ಬಳಿಕ ಮಂಗಳೂರಿನ ಎಚ್ಪಿಸಿಎಲ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಮಂಜೇಶ್ವರದಲ್ಲಿ ವಾಸವಾಗಿದ್ದು ಪತ್ನಿ, ಇಬ್ಬರು ಹೆಣ್ಣುಮಕ್ಕಳು, ತಂದೆ ತಾಯಿ, ಸಹೋದರರನ್ನು ಅಗಲಿದ್ದಾರೆ.