More

    ಪೊಲೀಸರ ರಾತ್ರಿ ಪ್ರಯಾಣಕ್ಕೆ ನಿರ್ಬಂಧ: ರಸ್ತೆ ಅಪಘಾತಗಳಲ್ಲಿ ಸಿಬ್ಬಂದಿ ಸಾವು ಪ್ರಕರಣಗಳ ಹೆಚ್ಚಳ

    ಬೆಂಗಳೂರು: ಗಾಂಜಾ ಗ್ಯಾಂಗ್ ಬೇಟೆಗೆ ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರು ಬಳಿ ಇನ್ನೋವಾ ಕಾರು ಅಪಘಾತ ಸಂಭವಿಸಿ ಸಬ್ ಇನ್​ಸ್ಪೆಕ್ಟರ್, ಕಾನ್​ಸ್ಟೇಬಲ್ ಸೇರಿ ಮೂವರು ದಾರುಣವಾಗಿ ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಸಿಬ್ಬಂದಿಗಳ ರಾತ್ರಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

    ಕಾನೂನು ಸುವ್ಯವಸ್ಥೆ ಬಂದೋ ಬಸ್ತ್, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖಾ ಸಂಬಂಧ ಹಾಗೂ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ವಾಹನದಲ್ಲಿ ಕರ್ತವ್ಯದ ನಿಮಿತ್ತ ಅಥವಾ ಕರ್ತವ್ಯದಿಂದ ಬಿಡುಗಡೆಯಾದ ನಂತರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಯಾಣ ಮಾಡದಂತೆ ಆದೇಶಿಸಲಾಗಿದೆ. ಸಿಐಡಿ ಕಚೇರಿಯಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಸಿಐಡಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.

    ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿಯಲ್ಲದೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ಸಾರ್ಪಿ ಹಾಗೂ ಇತರೆ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಯೂ ರಾತ್ರಿ ಪ್ರಯಾಣದ ವೇಳೆ ಅಪಘಾತಗಳಾಗಿ ಮೃತಪಟ್ಟಿರುವ ಉದಾಹರಣೆಗಳಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ ದೇಶದಲ್ಲಿ 2021ರಲ್ಲಿ ವಿವಿಧ ದರ್ಜೆಯ 427 ಅಧಿಕಾರಿ, ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಲ್ಲಿ 339 ಮಂದಿ ರಸ್ತೆ ಅಪಘಾತಗಳಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ದೇಶದಲ್ಲಿ ಒಟ್ಟಾರೆ ಕರ್ತವ್ಯದ ವೇಳೆ 1,632 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತಗಳಲ್ಲಿ 372 ಅಧಿಕಾರಿ ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಕರ್ನಾಟಕದಲ್ಲಿ ನಾಲ್ವರು ಮೃತಪಟ್ಟಿದ್ದರೆ 25 ಮಂದಿ ಗಾಯಗೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ಪೊಲೀಸರ ಹಿತದೃಷ್ಟಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸುವ ಆದೇಶ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಪ್ರಮುಖ ಅಪಘಾತ ಕೇಸ್​ಗಳು

    • ಆಂಧ್ರದಲ್ಲಿ ಮೂವರ ಸಾವು: ಶಿವಾಜಿನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಚಿತ್ತೂರಿನಲ್ಲಿದ್ದ ಗಾಂಜಾ ದಂಧೆಕೋರರನ್ನು ಹಿಡಿಯಲು ಹೋಗುತ್ತಿದ್ದಾಗ ಅವರಿದ್ದ ಇನ್ನೋವಾ ಕಾರು ಜು.24ರ ಬೆಳಗಿನ ಜಾವ ಅಪಘಾತವಾಗಿತ್ತು. ಪಿಎಸ್​ಐ ಅವಿನಾಶ್, ಕಾನ್​ಸ್ಟೆಬಲ್ ಅನಿಲ್ ಮಲಿಕ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಬ್ಬ ಪಿಎಸ್​ಐ ದೀಕ್ಷಿತ್ ಹಾಗೂ ಕಾನ್​ಸ್ಟೆಬಲ್ ಶರಣಬಸವ ಗಂಭೀರವಾಗಿ ಗಾಯಗೊಂಡಿದ್ದರು.
    • ಬಾಗಲಕೋಟೆಯಲ್ಲಿ ಮೂವರ ದುರ್ಮರಣ: 2018ರಲ್ಲಿ ಬೆಂಗಳೂರಿನಿಂದ ಚುನಾವಣಾ ಕರ್ತವ್ಯಕ್ಕೆ ತೆರಳಿ, ವಾಪಸ್ಸಾಗುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ಸಿಐಡಿ ಡಿವೈಎಸ್ಪಿ ಬಾಳೇಗೌಡ, ಇನ್​ಸ್ಪೆಕ್ಟರ್ ಶಿವಸ್ವಾಮಿ ಮತ್ತು ಚಾಲಕ ವೇಣುಗೋಪಾಲ್ ಮೃತಪಟ್ಟಿದ್ದರು.

    ರಾತ್ರಿ ಪ್ರಯಾಣ ಏಕೆ ಬೇಡ?

    • ಈವರೆಗಿನ ವರದಿ ಪ್ರಕಾರ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವುದು ರಾತ್ರಿ ಸಮಯದಲ್ಲೇ
    • ಅಗತ್ಯ ಸಂದರ್ಭದಲ್ಲಿ ಹೊರತುಪಡಿಸಿ ರಾತ್ರಿ ವೇಳೆ ವಾಹನ ಚಾಲನೆ ಯಾರಿಗೂ ಒಳ್ಳೆಯದಲ್ಲ
    • ಹೆದ್ದಾರಿಗಳಲ್ಲಿ ಡ್ರೖೆವಿಂಗ್ ಅಷ್ಟು ಸುಲಭವಲ್ಲ. ಹೆಚ್ಚು ಗಮನಹರಿಸಬೇಕಾದ, ಒತ್ತಡದ ಕೆಲಸ
    • ಚಾಲಕನಿಗೆ ನಿದ್ದೆ ಆವರಿಸುವ ಸಾಧ್ಯತೆ ಜಾಸ್ತಿ. ನಿದ್ದೆ ಮಂಪರಲ್ಲೇ ಬಹುತೇಕ ಅಪಘಾತಗಳಾಗಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts