ನವರಾತ್ರಿ ಸಡಗರ ನಮ್ಮ ಮನೆಯಲ್ಲಿ ಈಗಾಗಲೇ ಶುರುವಾಗಿದೆ. 10 ದಿನಗಳ ಕಾಲ ಒಂದಲ್ಲ ಒಂದು ಆಚರಣೆಗಳು ನಡೆಯುತ್ತಲೇ ಇರುತ್ತವೆ. ಪೌರೋಹಿತ್ಯ ಸಂಪ್ರದಾಯ ಇರುವುದರಿಂದ ಪೂಜೆ ಮತ್ತು ಅದರ ವಿಧಿ ವಿಧಾನಗಳು ಅಷ್ಟೇ ಕಟ್ಟುನಿಟ್ಟಾಗಿ ನಡೆಯುತ್ತವೆ. ಆ ಅವಧಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸೇರಿ ಹಲವು ಬಗೆಯ ಆಹಾರ ತ್ಯಜಿಸಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತೇವೆ. ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ನಮ್ಮ ಮನೆಯಲ್ಲಿ ಇಲ್ಲ. ಅದರ ಬದಲಿಗೆ ನಿತ್ಯ ದೇವಿ ಪಾರಾಯಣ, ಮಂತ್ರ ಪಠಣಗಳು ನೆರವೇರುತ್ತವೆ. ಇನ್ನುಳಿದಂತೆ ಆಯುಧ ಪೂಜೆ, ವಿಜಯದಶಮಿಯ ಸಂಭ್ರಮವೂ ಮನೆಯಲ್ಲಿ ಕಳೆಗಟ್ಟಿರುತ್ತದೆ. ಶಾರದೆ ನನ್ನ ಪ್ರಿಯ ದೇವತೆ ಆಗಿರುವುದರಿಂದ ಕಳೆದ ಬಾರಿ ಶೃಂಗೇರಿಗೆ ಹೋಗಿಬಂದಿದ್ದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಬಿಡುವಿದ್ದಾಗಲೆಲ್ಲ ಹೋಗಿದ್ದೇನೆ. ಕರೊನಾ ಹಿನ್ನೆಲೆಯಲ್ಲಿ ಈ ಸಲ ಸುತ್ತಾಟಕ್ಕೆ ಬ್ರೇಕ್ ಹಾಕಿದ್ದೇನೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಸರಳ ಆಚರಣೆಯ ಮೊರೆ ಹೋಗಿದ್ದೇನೆ. ನವರಾತ್ರಿಯ ನಿಜವಾದ ಆಚರಣೆ ಶುರುವಾಗುವುದು, ನಮ್ಮ ಸುತ್ತಮುತ್ತಲಿನ ಹೆಣ್ಣುಮಕ್ಕಳನ್ನು ಗೌರವಿಸುವುದರ ಮೂಲಕ. ಅದು ನನ್ನ ನಂಬಿಕೆ. ಅದು ನನಗೆ ನಿಜವಾದ ನವರಾತ್ರಿ ಆಚರಣೆ. ದೇವಿಯನ್ನು ಪೂಜೆ ಮಾಡದಿದ್ದರೂ ಪರವಾಗಿಲ್ಲ. ದೇವಸ್ಥಾನಕ್ಕೆ ಹೋಗದಿದ್ದರೂ ನಡೆಯುತ್ತದೆ. ಹೆಣ್ಣನ್ನು ಗೌರವಿಸಿ. ಅಷ್ಟೇ ಸಾಕು.